ಹಾಸನ: ಜಿಲ್ಲೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸಿ ರಾಜ್ಯದಲ್ಲಿ ಮೊದಲನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ನಮ್ಮ ಗುರಿ ಎಂದು ಮಾಜಿ ಸಚಿವ ಎಚ್ಡಿ. ರೇವಣ್ಣ ತಿಳಿಸಿದರು.
ಸೂರಜ್ ರೇವಣ್ಣ ಗೆಲುವಿನ ನಂತರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಮಾಡಿದ ಅಭಿವೃದ್ಧಿ ಕೆಲಸ, ಸೇವೆ ಇಂದು ಸೂರಜ್ ಗೆಲುವಿಗೆ ಕಾರಣವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಜೆಡಿಎಸ್ ಅಧಿಕಾರಕ್ಕೆ ತರುವ ಗುರಿ ಇದೆ ಎಂದರು. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು
ಜಿಲ್ಲೆಯ ಆರು ಶಾಸಕರು, ಸಂಸದರು ಹಾಗೂ ದೇವೇಗೌಡರ ಆಶೀರ್ವಾದದ ಫಲವಾಗಿ ಸೂರಜ್ ಗೌಡ ಅವರಿಗೆ ಗೆಲುವಾಗಿದೆ. ಸ್ಥಳೀಯ ಸಂಸ್ಥೆಗಳ ಎಲ್ಲ ಪ್ರತಿನಿಧಿಗಳು ಸೂರಜ್ ಅವರನ್ನು ಪಕ್ಷಾತೀತವಾಗಿ ಗೆಲ್ಲಿಸಿದ್ದಾರೆ. ಈ ಗೆಲುವನ್ನು ಸಂಸದರು, ಶಾಸಕರು, ಕಾರ್ಯಕರ್ತರಿಗೆ ಅರ್ಪಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಾನು ಸಾಯುವವರೆಗೂ ಹಾಸನ ಜಿಲ್ಲೆಗಾಗಿ ಕೆಲಸ ಮಾಡುವ ಆಸೆ ಇದೆ: ಭವಾನಿ ರೇವಣ್ಣ
ಶೃಂಗೇರಿ ಗುರುಗಳು, ಶಾರದಾ ದೇವಿ ಆಶೀರ್ವಾದ, ಸುತ್ತೂರು ಮಠದ ಆಶೀರ್ವಾದ ಈ ಕುಟುಂಬಕ್ಕೆ ಇದೆ. ಸೂರಜ್ ಏನು ದಡ್ಡರಲ್ಲ, ಡಾಕ್ಟರ್ ಓದಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿಧಾನ ಪರಿಷತ್ನಲ್ಲಿ ಅವರು ಚರ್ಚೆ ನಡೆಸಲಿದ್ದಾರೆ. 2023ರಲ್ಲಿ ಹಾಸನದಿಂದಲೇ ಈ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಪಕ್ಷ ಅಧಿಕಾರಿಕ್ಕೆ ಬರಲಿದೆ ಎಂದು ರೇವಣ್ಣ ತಿಳಿಸಿದ್ದಾರೆ.