ಬೆಳಗಾವಿ: ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಾವು ಈ ವಿಜಯವನ್ನು ಸಾಧಿಸಿದ್ದೇವೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಸಹೋದರ ಚನ್ನರಾಜ ಹಟ್ಟಿಹೋಳಿ ಗೆಲುವಿನ ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಾವು ಈ ವಿಜಯವನ್ನು ಸಾಧಿಸಿದ್ದೇವೆ. ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕೆ ನಾವೂ ಇವತ್ತು ಚುನಾವಣೆಯಲ್ಲಿ ಗೆದಿದ್ದೇವೆ. ನಮ್ಮ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಪಾದವನ್ನು ಮುಟ್ಟಿ ಧನ್ಯವಾದ ತಿಳಿಸುತ್ತೇನೆ. ಈ ಚುನಾವಣೆ ನನಗೆ ಪ್ರತಿಷ್ಠೆಯಾಗಿತ್ತು. ನನಗೆ ಮೊದಲಿನಿಂದಲೂ ಗೆಲ್ಲುವ ನಿರೀಕ್ಷೆ ಇತ್ತು. ಪ್ರಕಾಶ್ ಹುಕ್ಕೇರಿ, ಗಣೇಶ್ ಹುಕ್ಕೇರಿ, ಅಂಜಲಿ ನಿಂಬಾಳ್ಕರ್, ಎ.ಬಿ ಪಾಟೀಲ್, ಕಾಕಾ ಸಾಹೇಬ್ ಪಾಟೀಲ್, ವೀರ್ ಕುಮಾರ್ ಪಾಟೀಲರು, ಮಹೇಶ್ ತಮ್ಮಣ್ಣ, ಮೋಹಿತೆ, ವಿಶ್ವಾಸ್ ವೈದ್ಯ ಹೀಗೆ ಪ್ರತಿಯೊಬ್ಬರು ಸಹ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಹಣ ಬಲದ ಎದುರು ಜನ ಬಲಕ್ಕೆ ಸೋಲು: ಎಚ್ಡಿಕೆ
ಇದೇ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸೋಲಿಸಬೇಕೆಂದು ಲಖನ್ ಜಾರಕಿ ಹೊಳಿ ಅವರು ಸ್ಪರ್ಧಿಸಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾವು ಕಣದಲ್ಲಿ ಇದ್ದ 6 ಮಂದಿಯನ್ನು ಒಂದೇ ದೃಷ್ಟಿಯಿಂದ ನೋಡಿದ್ದೇವೆ. ಮೊದಲ ದಿನದಿಂದ ಇಲ್ಲಿಯವರೆಗೂ ಅವರು ಏನೇ ಮಾತನಾಡಿದ್ದರು ಅದ್ಯಾವುದಕ್ಕೂ ನಾವು ತಲೆ ಕೆಡಿಸಿಕೊಂಡಿಲ್ಲ. ಸಂಘಟಿತವಾಗಿ ಚುನಾವಣೆ ಪ್ರಚಾರ ಮಾಡಿದ್ದೇವು. ಅದರ ಫಲವೇ ಇಂದು ನಮ್ಮ ಗೆಲುವು. ಸಮಾಜ ನನ್ನ ಕೈ ಹಿಡಿದಿದೆ. ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷದ ನೇತೃತ್ವ ಇಂದು ವಿಜಯ ಶಾಲಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಾಹುಕಾರನಿಗೆ ಸವಾಲು ಹಾಕಿ ಎರಡನೇ ಬಾರಿ ಗೆದ್ದ ಹೆಬ್ಬಾಳ್ಕರ್