ಬೆಳಗಾವಿ: ರಾಜ್ಯ ಸರ್ಕಾರ ಪೊಲೀಸ್ (Police) ಇಲಾಖೆ ಮೂಲಕ ಕನ್ನಡಿಗರ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಒಂದು ವೇಳೆ ಪ್ರತಿಭಟನೆಗೆ ಅವಕಾಶ ನೀಡದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ (Maharashtra) ನಾಯಕರ ಹಾಗೂ ಸಚಿವರ ವಿರುದ್ಧ ಕನ್ನಡಿಗರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಪೊಲೀಸ್ ಇಲಾಖೆಯನ್ನು ಮುಂದೆ ಬಿಟ್ಟು ರಾಜ್ಯ ಗೃಹ ಸಚಿವರು ಕನ್ನಡಿಗರ ಹೋರಾಟ ಹತ್ತಿಕ್ಕಲು ಯತ್ನಿಸಿದ್ದಾರೆ. ಈಗಾಗಲೇ ಹಿರೇಬಾಗೆವಾಡಿಯಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರನ್ನು ತಡೆದು ಅವರನ್ನು ಬಂಧಿಸಲು ತಯಾರಿ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನು ಕರವೇ ಕಾರ್ಯಕರ್ತರು ಸಹಿಸಲ್ಲ. ಒಂದು ವೇಳೆ ಹೋರಾಟ ಹತ್ತಿಕ್ಕಲು ಯತ್ನಿಸಿದರೆ ಹೋರಾಟ ಸ್ವರೂಪ ಬೇರೆ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಹಾರಾಷ್ಟ್ರ ಮಂತ್ರಿಗಳಿಗೆ ನಾಯಕರಿಗೆ ಕರ್ನಾಟಕದಲ್ಲಿ ಮಹಾಮೇಳ ಮಾಡಲು ಅವಕಾಶ ಕೊಡುತ್ತಾರೆ. ಆದರೆ, ಕರ್ನಾಟಕದಲ್ಲಿ (Karnataka) ನಾಡು-ನುಡಿಗೆ ಹೋರಾಟ ಮಾಡುವ ಕನ್ನಡಪರ ಕಾರ್ಯಕರ್ತರಿಗೆ ಅವಕಾಶ ಕೊಡುತ್ತಿಲ್ಲ. ಇದು ದುರಂತ. ಹೋರಾಟ ಬೇರೆ ತಿರುವ ಪಡೆದುಕೊಳ್ಳುವ ಬದಲು ಪ್ರತಿಭಟನೆಗೆ ಪೊಲೀಸ್ ಇಲಾಖೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಹಿಂದುತ್ವ, ದೇಶಾಭಿಮಾನವೇ ಬಿಜೆಪಿ ತಂತ್ರ- ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್
ಕನ್ನಡಪರ ಹೋರಾಟಗಾರರ ಮೇಲೆ ಪೊಲೀಸರ ಹಲ್ಲೆ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ಕುಮಾರ್ ಐಜಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದಾರೆ. ಆ ತನಿಖೆ ಹೊರಗೆ ಬರಬೇಕು ಅಂತಾ ಕರವೇ ಕಾರ್ಯಕರ್ತರ ಆಗ್ರಹವಿದೆ. ಪೊಲೀಸರ ಈ ರೀತಿ ಮಾಡುವುದರಿಂದ ನಮಗೂ ಪೊಲೀಸರ ಮೇಲೆ ಅನುಮಾನ ಬರುತ್ತಿದೆ. ಪೊಲೀಸ್ ವಿರುದ್ಧ ಹೋರಾಟ ಮಾಡುತ್ತೇವೆ ಎನ್ನುವ ಕಾರಣಕ್ಕೆ ಪೊಲೀಸರು ತಡೆಯುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದರು.
ಕರವೇ ಬಂಧಿಸುವ ಕೆಲಸ ಮಾಡಿದ್ರೆ ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ. ಚೆನ್ನಮ್ಮ ವೃತ್ತದಲ್ಲಿ ಸಾವಿರ ಬಾವುಟ ಪ್ರದರ್ಶನವನ್ನು ತಡೆಯುವ ಯತ್ನವೂ ನಡೆಯುತ್ತಿದೆ. ಸರ್ಕಾರ ಕನ್ನಡಿಗರಿಗೆ ಮಲತಾಯಿ ಧೋರಣೆ ತೋರುತ್ತಿದೆ. ಮಹಾರಾಷ್ಟ್ರದ ಸಚಿವರು, ನಾಯಕರು ಉದ್ಧಟತನ ಹೇಳಿಕೆ ಕೊಡುತ್ತಿದ್ದಾರೆ. ಇದರ ವಿರುದ್ಧ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಯುತ್ತಿದ್ದರೂ ನಮ್ಮ ಬೆಳಗಾವಿ ರಾಜಕಾರಣಿಗಳು ಯಾರು ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಗ್ರ ಶಾರೀಕ್ಗೆ ಹರಿದು ಬರುತ್ತಿತ್ತು ಡಾಲರ್ ಮನಿ – ಕರೆನ್ಸಿ ವರ್ಗಾಯಿಸಿದ 40ಕ್ಕೂ ಅಧಿಕ ಜನರ ವಿಚಾರಣೆ