ಬೆಂಗಳೂರು: ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಎದೆ ಹಾಗೂ ತೊಡೆ ಭಾಗಕ್ಕೆ ತೀವ್ರ ಗಾಯವಾಗಿದ್ದು, ಅಪರೇಷನ್ ಮಾಡಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಲ್ಯ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಡಾ. ದಿವಾಕರ್ ಭಟ್, ವಿಶ್ವನಾಥ್ ಶೆಟ್ಟಿ ಅವರ ಎದೆ ಭಾಗಕ್ಕೆ ಮೂರು ಇರಿತ, ಹೊಟ್ಟೆಗೆ, ತೊಡೆ, ಕೈ ಹಾಗೂ ಮುಖದ ಭಾಗದಲ್ಲಿ ತಲಾ ಒಂದು ಇರಿತ ಸೇರಿದಂತೆ ಹಲವಾರು ಕಡೆ ಇರಿತವಾಗಿದೆ. ಆಸ್ಪತ್ರೆಗೆ ದಾಖಲಿಸಿದ ತಕ್ಷಣ ಆಪರೇಷನ್ ಥಿಯೇಟರ್ ಗೆ ಕರೆದುಕೊಂಡು ಹೋಗಿ ಸತತ ಮೂರು ಗಂಟೆಗಳ ಕಾಲ ಸರ್ಜರಿ ನಡೆಸಿದ್ದಾಗಿ ಹೇಳಿದರು.
ಎದೆ ಹಾಗೂ ಹೊಟ್ಟೆ ಭಾಗದಲ್ಲಿ ತೀವ್ರಗಾಯ ಉಂಟಾಗಿರುವ ಕಾರಣ ಹೆಚ್ಚಿನ ರಕ್ತಸ್ರಾವ ಉಂಟಾಗಿದೆ. ಇದರಿಂದ ಸರ್ಜರಿ ನಡೆಸಿ ರಕ್ತಸ್ರಾವನ್ನು ತಡೆಯಲಾಗಿದೆ. ನ್ಯಾ.ವಿಶ್ವನಾಥ್ ಅವರಿಗೆ ಈಗಾಗಲೇ ಬೈಪಾಸ್ ಸರ್ಜರಿ ನಡೆದಿರುವ ಕಾರಣ ಚಾಕುವಿನ ಇರಿತದಿಂದ ಹೆಚ್ಚಿನ ತೊಂದರೆ ಉಂಟಾಗಿದೆ. ಅದ್ದರಿಂದ ಅವರಿಗೆ ಮೂರು ನಾಲ್ಕು ದಿನಗಳ ಕಾಲ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಟೇಬಲ್ ಆಗಿದೆ. ಐದು ಜನರ ತಜ್ಞರ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದರು. ಇದನ್ನೂ ಓದಿ: ದೂರುಗಳ ಮೇಲೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ- ಪೊಲೀಸ್ ಮುಂದೆ ತಪ್ಪೊಪ್ಪಿಕೊಂಡ ತೇಜರಾಜ್
ನ್ಯಾ. ಮೂರ್ತಿ ವಿಶ್ವನಾಥ್ ಅವರಿಗೆ 74 ವರ್ಷ ಆಗಿರುವುದರಿಂದ ಅವರು ತೀರಾ ನೋವು ತಡೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಅವರಿಗೆ ಡಯಾಬಿಟಿಸ್ ಕೂಡ ಇದೆ. ತೀವ್ರ ರಕ್ತಸ್ರಾವ ಆಗಿರುವುದರಿಂದ ಅವರಿಗೆ ರಕ್ತವನ್ನು ನೀಡಲಾಗಿದೆ. ಸದ್ಯ ಅವರು ಮಾತನಾಡುತ್ತಿದ್ದು, ಅವರ ದೇಹದ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ಮುಂದುವರೆಸುವುದಾಗಿ ತಿಳಿಸಿದರು. ಇದನ್ನೂ ಓದಿ: ಇದು ಸರ್ಕಾರ ಏನ್ರೀ? ಮೊದಲು ಈ ಸರ್ಕಾರ ತೊಲಗಬೇಕು: ಮಾಜಿ ಉಪಲೋಕಾಯುಕ್ತ ಚಂದ್ರಶೇಖರಯ್ಯ