Well done, #TeamCongress! – ಕರ್ನಾಟಕ ಕಾಂಗ್ರೆಸ್‌ ಬೆನ್ನು ತಟ್ಟಿದ ರಾಹುಲ್‌ ಗಾಂಧಿ, ಸುರ್ಜೇವಾಲಾ

Public TV
2 Min Read
rahul randeep

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಸಾಧನೆಯನ್ನು ರಾಷ್ಟ್ರಮಟ್ಟದ ಕಾಂಗ್ರೆಸ್‌ ನಾಯಕರು ಕೊಂಡಾಡಿದ್ದಾರೆ. ಕಾಂಗ್ರೆಸ್‌ ಮುಖಂಡ ಹಾಗೂ ಸಂಸದ ರಾಹುಲ್‌ ಗಾಂಧಿ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ‘ವೆಲ್‌ ಡನ್‌, #TeamCongress’ ಎಂದು ಕರ್ನಾಟಕ ಕಾಂಗ್ರೆಸ್‌ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಇದರಲ್ಲಿ ಕನ್ನಡಿಗ ಸಹೋದರ ಸಹೋದರಿಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 RANDEEP SINGH

ಸುರ್ಜೇವಾಲಾ ಪತ್ರಿಕಾ ಹೇಳಿಕೆಯಲ್ಲೇನಿದೆ?: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ನಮಗೆ ಆಶೀರ್ವಾದ ಮಾಡಿದ ಎಲ್ಲಾ ಕನ್ನಡಿಗ ಸಹೋದರ ಸಹೋದರಿಯರಿಗೆ ಕಾಂಗ್ರೆಸ್ ಪಕ್ಷ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತದೆ. ಜನಸಾಮಾನ್ಯರನ್ನು ತಲುಪಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಕಾರ್ಯ ವೈಖರಿಯನ್ನು ಪಕ್ಷವು ವಿಶೇಷವಾಗಿ ಶ್ಲಾಘಿಸುತ್ತದೆ.

RAHULGANDHI

ಕಾಂಗ್ರೆಸ್ 58 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಭರ್ಜರಿ ಗೆಲುವು ಸಾಧಿಸಿದೆ. ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 58 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 500 ವಾರ್ಡ್‌ಗಳಲ್ಲಿ ಜಯ ಸಾಧಿಸಿದ್ದರೆ, ಆಡಳಿತಾರೂಢ ಬಿಜೆಪಿ 435 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ!, ಜೆಡಿಎಸ್ 45 ವಾರ್ಡ್‌ಗಳಲ್ಲಿ ಮಾತ್ರ ಗೆದ್ದಿದೆ. ಇತ್ತೀಚಿನ ಚುನಾವಣಾ ಫಲಿತಾಂಶಗಳಿಂದ ಅಭಿವೃದ್ಧಿ ಕೆಲಸಗಳನ್ನ ಕೈಬಿಟ್ಟು, ಆಡಳಿತ ಯಂತ್ರವನ್ನು ನಿಷ್ಕ್ರಿಯಗೊಳಿಸಿದ ಅಕ್ರಮ ಮತ್ತು ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನರು ಕಾಯುತ್ತಿದ್ದಾರೆ ಎಂದೆನಿಸುತ್ತಿದೆ. ಇದನ್ನೂ ಓದಿ: 58 ನಗರ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆ – ಹೆಚ್ಚು ಸ್ಥಾನ ಗೆದ್ದು ಕಾಂಗ್ರೆಸ್ ಕಮಾಲ್

CongressFlags1

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿನ ಮತ ಹಂಚಿಕೆಯು ರಾಜ್ಯದಲ್ಲಿ ಬಿಜೆಪಿಯ ಜನಪ್ರಿಯತೆಯ ಭಾರೀ ಕುಸಿತವನ್ನು ಸೂಚಿಸುತ್ತದೆ. ಕಾಂಗ್ರೆಸ್‌ನ ಮತ ಹಂಚಿಕೆಯು 42.06% ಕ್ಕೆ ಏರಿದ್ದು, ಬಿಜೆಪಿ ಮತ್ತು ಜೆಡಿಎಸ್ ಕ್ರಮವಾಗಿ 36.9% ಮತ್ತು 3.8% ಮತ ಪಡೆದಿವೆ. ಕೇಂದ್ರ, ರಾಜ್ಯ ಬಿಜೆಪಿ ಆಡಳಿತದಲ್ಲಿ ದೇಶವು ಹಲವು ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಮತದಾರರು ಬೆಲೆ ಏರಿಕೆ, ಆದಾಯ ಕುಸಿತ, ಉದ್ಯೋಗ ನಷ್ಟ, ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಜನರ ಹಿತದ ಬಗೆಗಿನ ಬಿಜೆಪಿ ಸರ್ಕಾರದ ನಿರಾಸಕ್ತಿಯನ್ನು ಗಮನಿಸಿ ತಕ್ಕ ಉತ್ತರ ನೀಡುತ್ತಾರೆ ಎಂಬುದು ತಡವಾಗಿ ಬಂದ ಸತತ ಚುನಾವಣಾ ಫಲಿತಾಂಶಗಳು ಸ್ಪಷ್ಟವಾಗಿ ಸಾಬೀತುಪಡಿಸಿವೆ.

ಮತಾಂತರ ವಿರೋಧಿ ಕಾನೂನು ಮತ್ತು ದೇವಾಲಯಗಳ ನಿರ್ವಹಣೆಯಂತಹ ಜನರ ದಾರಿ ತಪ್ಪಿಸುವ ಬಿಜೆಪಿಯ ತಂತ್ರಗಳನ್ನು ಜನ ಗಂಭೀರವಾಗಿ ತೆಗೆದುಕೊಂಡಿಲ್ಲ. ವಿಭಜಕ ಶಕ್ತಿಗಳ ಪಿತೂರಿಗಳನ್ನು ಪ್ರಗತಿಪರ ಕನ್ನಡಿಗರು ಅರಿತಿದ್ದಾರೆ. ಅಸಮರ್ಥ ಮತ್ತು ಭ್ರಷ್ಟ ಬೊಮ್ಮಾಯಿ ಸರ್ಕಾರವು ಅಭಿವೃದ್ಧಿ ಮತ್ತು ಪ್ರಗತಿಗೆ ಸಂಪೂರ್ಣ ವಿರುದ್ಧವಾಗಿದೆ.

ಪಕ್ಷದ ಸಂದೇಶವನ್ನು ಪ್ರತಿ ಮನೆ ಬಾಗಿಲಿಗೆ ತಲುಪಿಸಲು ಶ್ರಮಿಸಿದ ಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಸಿಎಲ್‌ಪಿ ನಾಯಕರಾದ ಸಿದ್ದರಾಮಯ್ಯ, ನಮ್ಮ ಶಾಸಕರು ಮತ್ತು ಎಲ್ಲಾ ಹಿರಿಯ ನಾಯಕರು ಮತ್ತು ಮಾಜಿ ಮಂತ್ರಿಗಳನ್ನು ನಾನು ಅಭಿನಂದಿಸುತ್ತೇನೆ. ಅವರ ನಿರಂತರ ಪರಿಶ್ರಮ ಮತ್ತು ಕಾರ್ಯದಲ್ಲಿನ ಏಕತೆ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುತ್ತದೆ ಮತ್ತು ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ನಂಬರ್ ಒನ್ ರಾಜ್ಯವನ್ನಾಗಿ ಮಾಡುವ ಹೊಸ ಯುಗವನ್ನು ಪ್ರಾರಂಭಿಸುತ್ತದೆ ಎಂದು ಅವರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *