ಧಾರವಾಡ: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮೇಲೆ ಎಫ್ಐಆರ್ ದಾಖಲು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು ಖಂಡಿಸಿ ಹೊರಟ್ಟಿ ವಿರುದ್ಧ ಪ್ರತಿಭಟನೆ ನಡೆದಿದೆ.
ಧಾರವಾಡದ ಮುಗದ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆಯ ವಿವಾದ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಮೇಲೆ ಕೂಡಾ ವಾಲ್ಮೀಕಿ ಸಂಘದವರು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಸದನದಲ್ಲಿ ಚರ್ಚೆ ನಡೆದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಇನ್ಸ್ಪೆಕ್ಟರ್ ಶ್ರೀಧರ ಸತಾರೆಯನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿತ್ತು. ಇದನ್ನೂ ಓದಿ: ಸಭಾಪತಿ ಹೊರಟ್ಟಿ ವಿರುದ್ಧ FIR ದಾಖಲಿಸಿದ್ದ ಇನ್ಸ್ಪೆಕ್ಟರ್ ಅಮಾನತು
ಸತಾರೆ ಅಮನತು ಖಂಡಿಸಿ ಧಾರವಾಡ ಗ್ರಾಮೀಣ ಠಾಣೆ ಎದುರು ವಾಲ್ಮೀಕಿ ಸಮಾಜದವರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ 8 ದಿನಗಳಲ್ಲಿ ಅಮಾನತು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಸವರಾಜ ಹೊರಟ್ಟಿ, ಜ. 25ಕ್ಕೆ ನನ್ನ ಮೇಲೆ ದೂರು ದಾಖಲಾಗಿತ್ತು, ಈ ವಿಷಯದ ಬಗ್ಗೆ ಹೆಚ್ಚು ಗಮನಹರಿಸಿರಲಿಲ್ಲ ನಾನು ಸುಮ್ಮನಿದ್ದೆ. ಎಸ್ಪಿ ಆಗಮಿಸಿ ನನ್ನೊಂದಿಗೆ ಕ್ಷಮೆ ಕೇಳಿದ್ದರು, ನಾನು ಘಟನೆ ನಡೆದ ದಿನ ಧಾರವಾಡದಲ್ಲಿ ಇರಲಿಲ್ಲ. ನಾನು ಬೆಂಗಳೂರಿನಲ್ಲಿ ಇದ್ದರು ನನ್ನ ಮೇಲೆ ಅಟ್ರಾಸಿಟಿ ದೂರು ಹಾಕಲಾಗಿದೆ. ತಪ್ಪು ಮಾಡದವರ ಮೇಲೆ ಕ್ರಮ ಕೈಗೊಂಡು ಬಲಿಪಶು ಮಾಡುವುದು ಬೇಡ. ಹಿರಿಯ ಅಧಿಕಾರಿ ಹೇಳಿದಂತೆ ಕಿರಿಯ ಅಧಿಕಾರಿಗಳ ಮೇಲೆ ಕ್ರಮ ಸರಿಯಲ್ಲ. ಪೊಲೀಸ್ ಮಹಾ ನಿರ್ದೇಶಕರ ಜೊತೆ ಈ ಬಗ್ಗೆ ಮಾತನಾಡುತ್ತೇನೆ, ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.