– ಪ್ರವೀಣ್ ರೆಡ್ಡಿ
ಕಲಬುರಗಿ: ಐಎಎಸ್ ಅನುರಾಗ ತಿವಾರಿ ಸಾವಿನ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಿದೆ. ಅನುರಾಗ್ ಮತ್ತವರ ಸ್ನೇಹಿತ ಪಿಎನ್ ಸಿಂಗ್ ಅವರು ಸಾವಿನ ಹಿಂದಿನ ದಿನ ಹೊರಗೆ ಹೋದವರು ಮರಳಿ ಗೆಸ್ಟ್ ಹೌಸ್ಗೆ ಹಿಂತಿರುಗಿದ್ದನ್ನ ನೋಡೇ ಇಲ್ಲ ಅಂತ ಭದ್ರತಾ ಸಿಬ್ಬಂದಿ ಹೇಳಿದ್ದಾರೆ.
ಅಲ್ಲದೆ, ಪಿಎನ್ ಸಿಂಗ್ ಮತ್ತು ಅನುರಾಗ್ ರೆಸ್ಟೋರೆಂಟ್ನಲ್ಲಿ ತಡರಾತ್ರಿವರೆಗೂ ಇದ್ದರು ಅನ್ನೋ ಮಾತೂ ಕೇಳಿ ಬಂದಿದೆ. ಆದರೆ, ಇದನ್ನ ಸಹೋದರರು ತಿರಸ್ಕರಿಸಿದ್ದಾರೆ.
ಪ್ರಕರಣದ ಕುರಿತು ಅನುರಾಗ್ ಸಹೋದರ ಅಲೋಕ್ ಅವ್ರನ್ನ ಪಬ್ಲಿಕ್ ಟಿವಿ ಮಾತನಾಡಿಸಿದಾಗ, `ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅನುರಾಗ್ ಉಸಿರುಗಟ್ಟಿ ಸಾವನಪ್ಪಿರುವ ಉಲ್ಲೇಖವಿದೆ. ಆದ್ರೆ ಈ ವರದಿ ಬಗ್ಗೆ ನಮಗೆ ತೃಪ್ತಿಯಿಲ್ಲ. ಹೀಗಾಗಿ ತಜ್ಞ ವೈದ್ಯರ ಜೊತೆ ಚರ್ಚಿಸುತ್ತೇವೆ. ವರದಿಯ ಪ್ರತಿ ಇನ್ನೂ ನಮ್ಮ ಕೈ ಸೇರಿಲ್ಲ. ಆದ್ರೆ, ವರದಿಯಲ್ಲಿನ ಅಂಶಗಳ ಬಗ್ಗೆ ಗೊತ್ತಾಗಿದೆ. ಕರ್ನಾಟಕದಲ್ಲಿ ಐಎಎಸ್ ಆದವರಿಗೆ ಬೆಲೆಯಿಲ್ಲ. ಅಲ್ಲಿ ಗುಮಾಸ್ತರಿಗೆ ಮಾತ್ರ ಬೆಲೆಯಿದೆ’ ಅಂತಾ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ನಿಗೂಢವಾಗಿ ಸಾವನಪ್ಪಿದ ಅಧಿಕಾರಿ ಅನುರಾಗ್ ತಿವಾರಿ ಕೊನೆ ಕ್ಷಣದ ವಿಡಿಯೋ ನೋಡಿ
ಪ್ರಕರಣದ ಬಗ್ಗೆ ಮತ್ತೋರ್ವ ಸಹೋದರ ಮಯಾಂಕ್ ಪ್ರತಿಕ್ರಿಯಿಸಿ `ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಿದ ಕೆಲ ಅಂಶಗಳನ್ನು ವೈದ್ಯರು ತೋರಿಸಿದ್ದಾರೆ. ಅದನ್ನು ಗಮನಿಸಿದಾಗ ಅನುರಾಗ್ ಕೊಲೆಯಾಗಿರುವ ಲಕ್ಷಣಗಳು ಕಂಡುಬರುತ್ತಿವೆ. ಪ್ರಕರಣದ ಬಗ್ಗೆ ಮುಖ್ಯಮಂತ್ರಿಯನ್ನು ಶೀಘ್ರದಲ್ಲಿಯೇ ಭೇಟಿಯಾಗುತ್ತೇವೆ. ಸಿಬಿಐ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವಂತೆ ಆಗ್ರಹಿಸುತ್ತೇವೆ ಅಂದ್ರು.
ಇನ್ನು ಮೇ 16ರಂದು ರಾತ್ರಿ ಫೋನ್ ನಲ್ಲಿ ಮಾತನಾಡಿದ್ದಾರೆ ನೀವೇನಾದ್ರೂ ಕರೆ ಮಾಡಿದ್ರಾ ಅಂತಾ ಕೇಳಿದಾಗ `ನನಗನ್ನಿಸುತ್ತದೆ ಅವರ ಮೊಬೈಲ್ ಬೇರೆಯವರ ಬಳಿಯಿತ್ತು. ಯಾಕಂದ್ರೆ ಅವರ ಮೊಬೈಲ್ ಲಾಕ್ ಮತ್ತು ಪಾಸ್ ವರ್ಡ್ ತೆಗೆಯಲಾಗಿದೆ. ಅವರ ಮೊಬೈಲನ್ನು ಬೇರೆಯವರ ಫಿಂಗರ್ ಸ್ಕ್ಯಾನ್ ಮಾಡಿ ಲಾಕ್ ತೆಗೆದಿದ್ದಾರೆ. ಕೊಲೆಯ ನಂತ್ರ ಮತ್ತು ಅದರ ನಂಬರ್ ಸಹ ಬದಲಾವಣೆ ಮಾಡಲಾಗಿದೆ. ಯಾವುದೇ ಮೆಸೇಜ್ ಬರದಂತೆ ಮಾಡಲಾಗಿದೆ. ಇದೆಲ್ಲವೂ ಕೂಡ ಒಂದು ವ್ಯವಸ್ಥಿತವಾಗಿ ಮಾಡಲಾಗಿದೆ ಅಂತಾ ಹೇಳಿದ್ರು.
ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯ ಅಂಶ ಇದೆ ಅಂತಾ ಹೇಗೆ ಹೇಳಿದ್ರಿ ಅಂತಾ ಕೇಳಿದಾಗ ಉತ್ತರಿಸಿದ ಮಯಾಂಕ್, `ವರದಿಯಲ್ಲಿರುವಂತೆ ಅನುರಾಗ್ ದೇಹದಲ್ಲಿ ಗಾಯಗಳಾಗಿವೆ. ಕೆಲ ಗಾಯಗಳು ಅವರ ದೇಹದ ಹೊರಭಾಗದಲ್ಲಿ ಕಂಡು ಬಂದಿವೆ. ಅದರಿಂದ ಇದೊಂದು ಸಹಜ ಸಾವು ಆಗಲು ಸಾಧ್ಯವಿಲ್ಲ. ಯಾರೋ ಅವರ ಕುತ್ತಿಗೆಯನ್ನು ಒತ್ತಿದ್ದಾರೆ. ಹೀಗಾಗಿ ಅವರ ತುಟಿಗಳು ಸಹ ಸೀಳಿವೆ. ದೇಹದಲ್ಲಿ ಯಾವುದೇ ವಿಷಕಾರಿ ಅಂಶಗಳು ಇರುವುದು ಪತ್ತೆಯಾಗಿಲ್ಲ ಅಂತಾ ಹೇಳಿದ್ದಾರೆ.