ನವದೆಹಲಿ: ಹಿಜಬ್ ಪ್ರಕರಣದಲ್ಲಿ( Hijab Case) ಸುಪ್ರೀಂ ಕೋರ್ಟ್ನಿಂದ(Supreme Court) ಭಿನ್ನ ತೀರ್ಪು ಪ್ರಕಟವಾಗಿದ್ದು, ಅರ್ಜಿ ತ್ರಿಸದಸ್ಯ ಪೀಠ ಅಥವಾ ಸಂವಿಧಾನ ಪೀಠದಲ್ಲಿ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ನ್ಯಾ. ಹೇಮಂತ್ ಗುಪ್ತಾ ಅವರು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದರೆ ನ್ಯಾ. ಸುಧಾಂಶು ಧೂಲಿಯಾ ಅವರು ಕರ್ನಾಟಕ ಹೈಕೋರ್ಟ್ ಆದೇಶವನ್ನು ವಜಾಗೊಳಿಸಿದ್ದಾರೆ.
ಇಬ್ಬರು ನ್ಯಾಯಮೂರ್ತಿಗಳಿಂದ ಭಿನ್ನವಾದ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಈ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆಯಾಗಲಿದೆ. ಇದನ್ನೂ ಓದಿ: ಹಿಜಬ್ ಬಗ್ಗೆ ಎದ್ದಿದ್ದ 3 ಪ್ರಶ್ನೆಗಳಿಗೆ ಸಿಕ್ತು ಉತ್ತರ: ಅರ್ಜಿದಾರರು, ಸರ್ಕಾರ, ಕರ್ನಾಟಕ ಹೈಕೋರ್ಟ್ ಹೇಳಿದ್ದೇನು?
ಶಾಲೆ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮೂರು ವಾರಗಳ ಹಿಂದೆ ತೀರ್ಪನ್ನು ಕಾಯ್ದಿರಿಸಿತ್ತು. ಸೆಪ್ಟೆಂಬರ್ 22ರವರೆಗೂ ನಿರಂತರವಾಗಿ 10 ದಿನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧೂಲಿಯಾ ಅವರಿದ್ದ ಪೀಠ ವಾದ- ಪ್ರತಿವಾದ ಆಲಿಸಿ ಇಂದು ತೀರ್ಪು ಪ್ರಕಟಿಸಿದೆ.
ಮಂದೇನು?
ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಹೈಕೋರ್ಟ್ ಆದೇಶವನ್ನು ರದ್ದು ಮಾಡದ ಕಾರಣ ಈ ಹಿಂದೆ ನೀಡಿದ ಆದೇಶ ಈಗಲೂ ಜಾರಿಯಲ್ಲಿರುತ್ತದೆ. ಇದರ ಅನ್ವಯ ವಿದ್ಯಾರ್ಥಿಗಳು ಶಾಲೆಗೆ ಹಿಜಬ್ ಧರಿಸಿಕೊಂಡು ಬಂದರೂ ತರಗತಿಯಲ್ಲಿ ಹಿಜಬ್ ತೆಗೆದು ಪಾಠವನ್ನು ಕೇಳಬೇಕಾಗುತ್ತದೆ.
ಹೈಕೋರ್ಟ್ ತೀರ್ಪು ಏನಿತ್ತು?
ಹಿಜಬ್ ವಿವಾದ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಹಿಜಬ್ ಮುಸ್ಲಿಂ ಧರ್ಮದ ಅಗತ್ಯ ಆಚರಣೆ ಅಲ್ಲ ಎಂದು ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಈ ಆದೇಶ ಮತ್ತು ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.