ಬೆಂಗಳೂರು: ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಪ್ರವಾಹಕ್ಕೆ ಇದುವರೆಗೆ 9 ಮಂದಿ ಮೃತಪಟ್ಟಿದ್ದು, 52 ಜಾನುವಾರು ಬಲಿಯಾಗಿವೆ.
ರಾಜ್ಯದ 12 ಜಿಲ್ಲೆಗಳ 51 ತಾಲೂಕುಗಳಲ್ಲಿ ಪ್ರವಾಹ ಉಂಟಾಗಿದೆ. ಈ ಪ್ರದೇಶಗಳ 503 ಹಳ್ಳಿಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದ 44,000 ಜನರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಮುಟ್ಲುಪಾಡಿಯಲ್ಲಿ ರಣ ಭೀಕರ ಬಿರುಗಾಳಿ- 100 ಮನೆಗಳಿಗೆ ಹಾನಿ
ಪ್ರವಾಹದಿಂದಾಗಿ 2,611 ಮನೆಗಳು ಹಾನಿಯಾಗಿವೆ. ಸಂತ್ರಸ್ತರಿಗಾಗಿ 272 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 17,000 ಮಂದಿ ಆಶ್ರಯ ಪಡೆದಿದ್ದಾರೆ. ಹಳ್ಳ ಹಾಗೂ ನದಿ ಪಾತ್ರದ ಜಮೀನು ಸೇರಿದಂತೆ 1,48,293 ಹೆಕ್ಟೇರ್ ಜಮೀನುಗಳ ಬೆಳೆ ನಾಶವಾಗಿದೆ.
ವರುಣ ಅಬ್ಬರಕ್ಕೆ ಮೂಕ ಪ್ರಾಣಿಗಳ ವೇದನೆ ಮುಗಿಲು ಮುಟ್ಟಿದೆ. ಕೆಲವರು ಜಾನುವಾರುಗಳನ್ನು ತಮ್ಮ ಜೊತೆಗೆ ಕರೆದೊಯ್ದರೆ ಕೆಲವರು ಗ್ರಾಮಗಳಲ್ಲೇ ಬಿಟ್ಟು ಹೋಗಿದ್ದಾರೆ. ಸ್ಥಳೀಯರ ಜೊತೆ ಸೇರಿ ಎಸ್ಡಿಆರ್ಎಫ್ ತಂಡವು ಸುಮಾರು 17,000 ಜಾನುವಾರುಗಳನ್ನು ರಕ್ಷಣೆ ಮಾಡಿದೆ. ಅವುಗಳಿಗೆ 3,000 ಕ್ಯಾಂಪ್ ವ್ಯವಸ್ಥೆ ಮಾಡಲಾಗಿದ್ದು, ಮೇವು ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಘಟಪ್ರಭಾ ಪ್ರವಾಹದಲ್ಲಿ ಸಿಲುಕಿದ್ದ ತಂದೆ, ಮಗನ ರಕ್ಷಣೆ