ಬೆಂಗಳೂರು: ಮೂಡಾ (MUDA Case) ಎಂಬ ಸುಳ್ಳು ಪ್ರಕರಣವನ್ನು ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯನವರ (CM Siddaramaiah) ಹೆಸರಿಗೆ ಮಸಿ ಬಳಿಯುವ ಹಾಗೂ ಜನಪರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ವಿರೋಧ ಪಕ್ಷಗಳ ರಾಜಕೀಯ ಷಡ್ಯಂತ್ರಕ್ಕೆ ಸೋಲಾಗಿದೆ. ಲೋಕಾಯುಕ್ತ ಸಂಸ್ಥೆ ಕಾನೂನು ಬದ್ದವಾಗಿ ತನಿಖೆ ನಡೆಸಲಿದ್ದು ಸದ್ಯದಲ್ಲೇ ಸತ್ಯ ಹೊರಬೀಳಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು (NS Boseraju) ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆಯನ್ನು ನೀಡಿರುವ ಅವರು ಇಂದು ಹೈಕೋರ್ಟ್ (High Court) ನೀಡಿರುವ ತೀರ್ಪು ಬಹಳ ಮಹತ್ವದ್ದಾಗಿದೆ.
ಸಿಬಿಐ ಹಾಗೂ ಇಡಿ ಯಂತಹ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಎದುರಾಳಿಗಳನ್ನು ಹಣಿಯಬಹುದು ಎಂಬ ಬಿಜೆಪಿ (BJP) ಲೆಕ್ಕಾಚಾರಕ್ಕೆ ಹೈಕೋರ್ಟ್ನ (High Court) ಈ ತೀರ್ಪು ಎಚ್ಚರಿಕೆಯಾಗಿದೆ. ತಡವಾದರೂ ಸತ್ಯಕ್ಕೆ ಜಯ ಸಿಗುತ್ತದೆ ಎಂಬುದು ರುಜುವಾತಾಗಿದೆ. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ – CBI ತನಿಖೆಗೆ ವಹಿಸಲು ಹೈಕೋರ್ಟ್ ನಕಾರ
ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾಗ ಅಸಾಧ್ಯವೆಂದು ಅಣಕವಾಡಿದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಈಗ ಸಿದ್ದರಾಮಯ್ಯನವರು ನುಡಿದಂತೆ ನಡೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಬಡವರು ಹಾಗೂ ಮಧ್ಯಮ ವರ್ಗದ ಪಾಲಿಗೆ ಉತ್ತಮ ಆಡಳಿತ ನೀಡುತ್ತಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯಬೇಕು, ಜನಪರ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಆ ಪ್ರಯತ್ನಗಳ ಪೈಕಿ ಮುಡಾ ಪ್ರಕರಣ ಕೂಡ ಒಂದಾಗಿದೆ. ಇದನ್ನೂ ಓದಿ: POCSO Case: ಬಂಧನ ಭೀತಿಯಿಂದ ಬಚಾವ್, ಬಿಎಸ್ವೈಗೆ ಜಾಮೀನು- ಕೋರ್ಟ್ ಹೇಳಿದ್ದೇನು?
2021ರಲ್ಲಿ ಸಿದ್ದರಾಮಯ್ಯನವರ ಕುಟುಂಬಕ್ಕೆ 14 ಸೈಟ್ ಕೊಟ್ಟ ಬಸವರಾಜ ಬೊಮ್ಮಾಯಿ ಅವರಿಗೆ ಇಡಿ ನೋಟಿಸ್ ನೀಡಬೇಕಿತ್ತು. ಮುಡಾಗೆ ಸಂಬಂಧಿಸಿ ಜಮೀನಿನ ನೋಂದಣಿ, 50:50 ನೀಡಿಕೆ ರೂಲ್ಸ್, ಸೈಟ್ ನೀಡಿದ್ದು ಎಲ್ಲವೂ ಬಿಜೆಪಿ ಸರ್ಕಾರದ ಅವಧಿಯಲ್ಲೇ ನಡೆದಿರುವಾಗ ಸಿದ್ದರಾಮಯ್ಯನವರನ್ನು ಗುರಿಯಾಗಿಸಿಕೊಂಡಿರುವುದು ರಾಜಕೀಯ ದುರುದ್ದೇಶವಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿಯ ಸ್ಥಿತಿ ಮನೆಯೊಂದು ನೂರು ಬಾಗಿಲು ಎಂಬಂತಾಗಿದೆ. ಬಿಜೆಪಿ ಆಂತರಿಕ ಕಲಹವನ್ನು ಮುಚ್ಚಿಹಾಕಲು ಮುಡಾ ವಿಚಾರವನ್ನು ಮುಂದಿಟ್ಟು ಸುಖಾಸುಮ್ಮನೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿ ವಿರೋಧ ಪಕ್ಷಗಳು ಸಫಲರಾಗುವುದಿಲ್ಲ ಎಂದಿದ್ದಾರೆ.