ಸರ್ಕಾರದಿಂದ ಭ್ರಷ್ಟಾಚಾರಕ್ಕೆ ಎಡೆಯಾಗಲಿದ್ದ ಬಿಬಿಎಂಪಿಯ ಬಿಲ್ ಪ್ರಸ್ತಾವನೆ ರಿಜೆಕ್ಟ್!

Public TV
1 Min Read
bbmp bangalore

ಬೆಂಗಳೂರು: ತಮಗೆ ಬೇಕಾದ ಕಾಮಗಾರಿಗಳಿಗೆ 295 ಕೋಟಿ ರೂ. ಹಣವನ್ನು ಬಿಡುಗಡೆ ಮಾಡುವಂತೆ ಸಲ್ಲಿಕೆಯಾಗಿದ್ದ ಬಿಬಿಎಂಪಿ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ.

ಪ್ರಸ್ತಾವನೆಯಲ್ಲಿ ಸ್ಪಷ್ಟ ಅಭಿಪ್ರಾಯ ಇಲ್ಲ ಎಂದು ಹೇಳಿ ನಗರಾಭಿವೃದ್ಧಿ ಇಲಾಖೆಯಿಂದ ಬಿಬಿಎಂಪಿ ಆಯುಕ್ತರಿಗೆ ಆದೇಶ ಪ್ರಕಟವಾಗಿದೆ. ಹೈಕೋರ್ಟ್ ಆದೇಶದಂತೆ ಹಿರಿತನ ಆಧಾರದ ಮೇಲೆ ಬಿಲ್ ಬಿಡುಗಡೆ ಪದ್ಧತಿ ಮುಂದುವರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಈ ಹಿಂದೆ ಗುತ್ತಿಗೆದಾರರು ಪ್ರಭಾವಿ ರಾಜಕಾರಣಿಗಳ ಮೂಲಕ ಲೆಟರ್ ಆಫ್ ಕ್ರೆಡಿಟ್ (ಎಲ್‍ಒಸಿ) ಪಡೆದು ಬಿಬಿಎಂಪಿಗೆ ಸಲ್ಲಿಸಿ ಹಿರಿತನವಿಲ್ಲದಿದ್ದರೂ ಬಿಲ್ ಮೊತ್ತ ಪಡೆದುಕೊಳ್ಳುತ್ತಿದ್ದರು. 2015ರಲ್ಲಿ ಈಗಿನ ಮುಖ್ಯ ಕಾರ್ಯದರ್ಶಿಯಾಗಿರುವ ವಿಜಯಭಾಸ್ಕರ್ ಬಿಬಿಎಂಪಿ ಆಯುಕ್ತರಾಗಿದ್ದ ವೇಳೆ ಎಲ್‍ಒಸಿ ಪಡೆದು ಬಿಲ್ ಪಾವತಿಸುವ ವ್ಯವಸ್ಥೆಯನ್ನು ರದ್ದುಗೊಳಿಸಿ ಮೊದಲು ಕೆಲಸ ಮುಗಿಸಿದವರಿಗೆ ಬಿಲ್ ಪಾವತಿ ಮಾಡುವ ಹಿರಿತನದ ನಿಯಮವನ್ನು ಜಾರಿಗೆ ತಂದಿದ್ದರು.

ಈ ನೀತಿಯನ್ನು ಗಾಳಿಗೆ ತೂರಿ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಸಚಿವರ ವಿವೇಚನೆಗೊಳಪಟ್ಟ ಕಾಮಗಾರಿಗಳಿಗೆ 85 ಕೋಟಿ ರೂ., ಮೇಯರ್ ಆದೇಶಿಸುವ ಕಾಮಗಾರಿಗಳಿಗೆ 160 ಕೋಟಿ ರೂ., ಉಪಮೇಯರ್ ಸೂಚಿಸುವ ಕಾಮಗಾರಿಗಳಿಗೆ 50 ಕೋಟಿ ರೂ. ಸೇರಿ ಒಟ್ಟು 295 ಕೋಟಿ ರೂ. ಅನುದಾನಕ್ಕೆ ಹಿರಿತನವಿಲ್ಲ ಎಂದು ಆಯುಕ್ತರು ತಮ್ಮ ಅಧಿಕಾರಕ್ಕೆ ಬಳಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಭ್ರಷ್ಟಾಚಾರಕ್ಕೆ ಎಡೆ ಮಾಡಿ ಕೊಡುತ್ತಾ ಈ ಪದ್ದತಿ ಎನ್ನುವ ಅನುಮಾನ ಎದ್ದಿತ್ತು. ಇದರಿಂದಾಗಿ ಪರ್ಸಂಟೇಜ್ ಕಾಮಾಗಾರಿಗಳಿಗೆ ಬೇಗನೆ ಬಿಲ್ ಪಾವತಿಯಾಗುವ ಸಾಧ್ಯತೆಯಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈ ವಿಚಾರ ಚರ್ಚೆಯಾಗುತ್ತಿರುವಾಗಲೇ ಸರ್ಕಾರ ಪ್ರಸ್ತಾಪವನ್ನು ತಿರಸ್ಕರಿಸಿ ಆಗಬಹುದಾಗಿದ್ದ ವಿವಾದವನ್ನು ತಣ್ಣಗೆ ಮಾಡಿದೆ. ಸದ್ಯಕ್ಕೆ ಬಿಬಿಎಂಪಿಯಲ್ಲಿ 2 ಸಾವಿರ ಕೋಟಿ ರೂಪಾಯಿಯ 8,119 ಬಿಲ್‍ಗಳು ಬಾಕಿ ಇದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *