ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಇದೀಗ ರಾಜ್ಯ ಸರ್ಕಾರಕ್ಕೆ ಹೊಸ ತಲೆನೋವು ಶುರುವಾಗಿದೆ.
ಕೆಳ ಹಂತದ ನ್ಯಾಯಾಲಯ 100 ಕೋಟಿ ರೂಪಾಯಿಗಳನ್ನ ಜಯಲಲಿತಾ ಅವರಿಂದ ವಸೂಲಿ ಮಾಡುವಂತೆ ಆದೇಶ ಮಾಡಿತ್ತು. ಈ ಹಿನ್ನಲೆಯಲ್ಲಿ ಈಗಾಗಲೇ ಮೃತರಾಗಿರೋ ಜಯಲಲಿತಾ ಬಳಿ ಹೇಗೆ ದಂಡ ವಸೂಲಿ ಮಾಡಬೇಕು ಅನ್ನೋ ಚಿಂತೆ ಶುರುವಾಗಿದೆ.
ಈಗಾಗಲೇ ಸರ್ಕಾರ ದಂಡದ ಹಣವನ್ನು ವಸೂಲಿ ಮಾಡಲು ಕಮಿಟಿ ರಚನೆ ಮಾಡಲು ಯೋಚಿಸಿದ್ದು, ಕಮಿಟಿ ರಚಿಸೋದಕ್ಕೂ ಮುಂಚೆ ಸುಪ್ರೀಂಕೋರ್ಟ್ ಬಳಿ ಮತ್ತೊಂದು ಅರ್ಜಿ ಹಾಕಿ ದಂಡ ವಸೂಲಿಯ ಬಗ್ಗೆ ಇರೋ ಗೊಂದಲಗಳನ್ನು ಸ್ಪಷ್ಟಪಡಿಸಿಕೊಳ್ಳಲು ಮುಂದಾಗಲಿದೆ ಎಂದು ಹೇಳಲಾಗಿದೆ. ಕಾನೂನಿನ ಕೆಲ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೆ ಮೃತರಾದ್ರೆ ಅವರ ಮೇಲಿನ ದಂಡವನ್ನು ಕಡಿಮೆ ಮಾಡಬಹುದು. ಆದ್ರೆ ಇಲ್ಲಿ ಪ್ರಕರಣದ ವಿಚಾರಣೆ ಮುಕ್ತಾಯವಾಗಿ ತೀರ್ಪು ಕಾಯ್ದಿರಿಸಿದಾಗ ಜಯಲಲಿತಾ ಮೃತಪಟ್ಟಿರೋದ್ರಿಂದ ಹಾಗೂ ಸುಪ್ರೀಂ ಕೋರ್ಟ್ ಸಹ ಸ್ಪಷ್ಟವಾಗಿ ದಂಡವನ್ನು ಯಾವ ರೀತಿ ವಸೂಲಿ ಮಾಡಿ ಅಂತ ಆದೇಶ ನೀಡದ ಕಾರಣ, ರಾಜ್ಯ ಸರ್ಕಾರ ಮತ್ತೊಮ್ಮೆ ಅರ್ಜಿ ಹಾಕಿ ಕೋರ್ಟ್ನಿಂದ ಸ್ಪಷ್ಟೀಕರಣ ಕೇಳಲು ತೀರ್ಮಾನಿಸಿದೆ.