ಬೆಂಗಳೂರು: ಜಯಪ್ರಕಾಶ್ ಹೆಗ್ಡೆ ಅವರ ಸಮಿತಿಯು ಸಲ್ಲಿಸಿರುವ ಜಾತಿಗಣತಿ ವರದಿಯನ್ನು (Caste Census) ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬಾರದು ಎಂದು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ (Vokkaligara Sangha) ಒತ್ತಾಯಿಸಿದೆ.
ಕಾಂತರಾಜು ಅವರ ಸಮಿತಿಯ ವರದಿಯನ್ನ ಜಯಪ್ರಕಾಶ್ ಹೆಗ್ಡೆ ಅವರ ಸಮತಿ ನಿನ್ನೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಈ ವರದಿಯನ್ನ ಸರ್ಕಾರ ಅನುಷ್ಠಾನಕ್ಕೆ ತರಬಾರದು. ಇದು 10 ವರ್ಷಗಳ ಹಳೆಯ ಸಮೀಕ್ಷೆಯ ವರದಿ. ಈ ವರದಿಯ ಮೇಲೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ನಮ್ಮ ಒಕ್ಕಲಿಗ ಸಮಾಜ ಒಪ್ಪುವುದಿಲ್ಲ. ಮುಂದೆ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತೆ ಎಂದು ಸರ್ಕಾರಕ್ಕೆ ಸಮತಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಸಿದ್ದರಾಮಯ್ಯ ನಮ್ಮ ಮಾತು ಎಲ್ಲಿ ಕೇಳ್ತಾರೆ: ಜಾತಿಗಣತಿ ಬಗ್ಗೆ ಶಾಮನೂರು ಶಿವಶಂಕರಪ್ಪ ಕಿಡಿ
ಸರ್ಕಾರ ವರದಿಯನ್ನ ತಿರಸ್ಕರಿಸಬೇಕು. ಹೊಸದೊಂದು ಸಮಿತಿ ಮಾಡಿ ಸಾಮಾಜಿಕ-ಆರ್ಥಿಕ ಗಣತಿ ಮಾಡಿಸಿ. ಈ ವರದಿ ಔಟ್ಡೇಟ್ ಆಗಿದೆ. ಇದರಿಂದ ಯಾವುದೇ ನ್ಯಾಯ ಸಿಗುವುದಿಲ್ಲ. ಇದರಿಂದ ಜನರಲ್ಲಿ ಬಿರುಕು ಮೂಡುತ್ತದೆ. ಸರ್ಕಾರ ಈ ರೀತಿ ಆಗದಂತೆ ನಿಗಾವಹಿಸಬೇಕು ಎಂದು ಆಗ್ರಹಿಸಿದೆ.
ನಾವು ನಮ್ಮ ಸಮಾಜದ ನಾಯಕರು ನಿರ್ಮಲಾನಾಂದನಾಥ ಸ್ವಾಮಿಗಳ ನೇತೃತ್ವದಲ್ಲಿ ಸಭೆ ಮಾಡಿ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡುತ್ತೇವೆ. ಸರ್ಕಾರ ಇದನ್ನ ಸ್ವೀಕರಿಸಿ ಕಾರ್ಯರೂಪಕ್ಕೆ ತರುವ ಯೋಜನೆ ಮಾಡಿದ್ರೆ ಹೋರಾಟ ಮಾಡಲೇಬೇಕಾಗುತ್ತದೆ ಎಂದು ಸಮಿತಿಯ ಅಧ್ಯಕ್ಷ ಶ್ರೀಕಂಠಯ್ಯ, ಸಂಚಾಲಕ ನಾಗರಾಜ್ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸೇರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸ್ತಾರಾ ಜಯಪ್ರಕಾಶ್ ಹೆಗ್ಡೆ?