– ಇಂದಿನಿಂದ ರಾಯರ ಆರಾಧನೆ
ರಾಯಚೂರು: ಭೀಕರ ಪ್ರವಾಹದಿಂದ ಅತ್ತ ಮನೆಯೂ ಇಲ್ಲ, ಇತ್ತ ಚಿಕಿತ್ಸೆಯೂ ಸಿಗದೆ ಬಾಲಕನೋರ್ವ ಪರದಾಡುತ್ತಿರುವ ಘಟನೆ ರಾಯಚೂರಿನ ಯಳಗುಂದಿ ನಿರಾಶ್ರಿತರ ಕೇಂದ್ರದಲ್ಲಿ ನಡೆದಿದೆ.
ಲಿಂಗಸುಗೂರಿನ ಕಡದರಗಡ್ಡಿ ನಡುಗಡ್ಡೆಯ ಬಾಲಕ ಯಲ್ಲಪ್ಪ ಕಳೆದ ಎಂಟು ದಿನಗಳಿಂದ ಬಾಲಕ ಜ್ವರ ಹಾಗೂ ಕಾಲು ಬಾವಿನಿಂದ ನರಳಾಡುತ್ತಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ವೈದ್ಯರು ಬಾಲಕನನ್ನು ರಾಯಚೂರಿಗೆ ಕಳುಹಿಸಲು ಸೂಚನೆ ನೀಡಿದ್ದಾರೆ.
ಆದರೆ ಜಲದುರ್ಗ ಸೇತುವೆ ಮುಳುಗಡೆ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ನಿರಾಶ್ರಿತರ ಕೇಂದ್ರದಿಂದ ಹೊರಗಡೆ ಬಾರದ ಸ್ಥಿತಿಯಲ್ಲಿದ್ದಾರೆ. ಹೆಲಿಕಾಪ್ಟರ್ ಮೂಲಕವಾದರೂ ಕರೆದ್ಯೊಯ್ದು ಬಾಲಕನಿಗೆ ಚಿಕಿತ್ಸೆ ಕೊಡಿಸುವಂತೆ ಪೋಷಕರು ಜಿಲ್ಲಾಡಳಿತದ ಬಳಿ ಮನವಿ ಮಾಡಿದ್ದಾರೆ.
ಇತ್ತ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದರೂ ಪ್ರವಾಹದ ಭೀತಿಯಂತೂ ಸದ್ಯಕ್ಕೆ ದೂರವಾಗಿದೆ. ಹೀಗಾಗಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲು ಸಕಲ ಸಿದ್ಧತೆಗಳು ನಡೆದಿದೆ. ಇಂದಿನಿಂದ ಆಗಸ್ಟ್ 18 ವರೆಗೆ ರಾಯರ 348ನೇ ಆರಾಧನಾ ಮಹೋತ್ಸವ ನಡೆಯಲಿದೆ.
ಇಂದು ಸಂಜೆ ಗೋಪೂಜೆ, ಧ್ವಜಾರೋಹಣದೊಂದಿಗೆ ಆರಾಧನೆಗೆ ಚಾಲನೆ ಸಿಗಲಿದೆ. ಇನ್ನು ಆಗಸ್ಟ್ 16ರಂದು ಪೂರ್ವರಾಧನೆ ನಡೆಯಲಿದ್ದು ಈ ಬಾರಿಯ ವಿಶೇಷವೆಂದರೆ ತಿರುಪತಿ ತಿರುಮಲ ದೇವಸ್ಥಾನದಿಂದ ಬರುವ ಶೇಷವಸ್ತ್ರವನ್ನು ಪೂರ್ವಾರಾಧನೆ ದಿನವೇ ರಾಯರಿಗೆ ಸರ್ಮಪಣೆ ಮಾಡಲಾಗುತ್ತಿದೆ.