ರಾಯಚೂರು: ಕೃಷ್ಣಾ ನದಿಯಲ್ಲಿ ಪ್ರವಾಹ ಸ್ವಲ್ಪಮಟ್ಟಿಗೆ ಇಳಿಕೆಯಾಗಿದ್ದು, ಆದರೆ ತುಂಗಭಾದ್ರಾ ನದಿ ಅಬ್ಬರಿಸುತ್ತಿದೆ. ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ರಾಯರ ಏಕಶಿಲಾ ವೃಂದಾವನ ಜಲಾವೃತಗೊಂಡಿದೆ.
ರಾಯಚೂರಿನ ಎಲೆಬಿಚ್ಚಾಲಿಯ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ನೀರು ಬಂದಿದೆ. ಈ ಸ್ಥಳದಲ್ಲಿ ರಾಯರು ಸುಮಾರು 12 ವರ್ಷ ಜಪ ಮಾಡಿದ್ದರಂತೆ. ಹೀಗಾಗಿ ರಾಯರು ಜಪ ಮಾಡಿದ್ದ ಸ್ಥಳದಲ್ಲಿ ಏಕಶಿಲಾ ವೃಂದಾವನವನ್ನು ನಿರ್ಮಿಸಲಾಗಿತ್ತು. ಮಂತ್ರಾಲಯದ ಪಕ್ಕದಲ್ಲಿಯೂ ತುಂಗಭದ್ರಾ ಪ್ರವಾಹ ಉಂಟಾಗಿದೆ. ಆದರೆ ಮಂತ್ರಾಲಯದ ಮಠಕ್ಕೆ ಯಾವುದೇ ತೊಂದರೆಯಾಗಿಲ್ಲ.
ಇತ್ತ ಗಡಿನಾಡು ಕನ್ನಡಿಗರಿಗೂ ಕೃಷ್ಣಾ ನದಿಯ ಪ್ರವಾಹದ ಎಫೆಕ್ಟ್ ತಟ್ಟಿದೆ. ತೆಲಂಗಾಣಕ್ಕೆ ಸೇರಿದ ಹಿಂದುಪೂರ, ಕೃಷ್ಣ, ಗುರ್ಜಾಲ್, ಮುಳುವಲ್ ಗ್ರಾಮಗಳಿಗೆ ನೀರು ನುಗ್ಗಿದೆ. ಕನ್ನಡಿಗರೇ ವಾಸಿಸುತ್ತಿರುವ ಕೃಷ್ಣಾ ನದಿ ದಂಡೆಯ ತೆಲಂಗಾಣದ ಗ್ರಾಮಗಳಲ್ಲಿಯೂ ಪ್ರವಾಹದ ಭೀತಿ ಎದುರಾಗಿದೆ.
ಕೃಷ್ಣ ಗ್ರಾಮದ ರೈಲ್ವೆ ಸ್ಟೇಷನ್, ದತ್ತಾತ್ರೇಯ ದೇವಸ್ಥಾನ ಜಲಾವೃತಗೊಂಡಿದೆ. ಕೃಷ್ಣ ರೈಲ್ವೆ ಸೇತುವೆ ಮುಳುಗಡೆಯ ಹಂತದಲ್ಲಿದೆ. ಹೀಗಾಗಿ ತೆಲಂಗಾಣ ಸರ್ಕಾರ ಗಡಿನಾಡು ಗ್ರಾಮಗಳನ್ನ ಖಾಲಿ ಮಾಡಿಸುತ್ತಿದೆ.