-14 ಕ್ಷೇತ್ರ 452 ನಾಮಪತ್ರ
-3.5 ಕೋಟಿ ಮೌಲ್ಯದ ಚಿನ್ನಾಭರಣ ವಶ
ಬೆಂಗಳೂರು: ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯವಾಗಿದೆ. ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ನಾಮಪತ್ರದ ಬಗ್ಗೆ ಮಾಹಿತಿ ನೀಡಿದರು.
14 ಕ್ಷೇತ್ರಗಳಲ್ಲಿ ಬರೋಬ್ಬರಿ 452 ನಾಮಪತ್ರಗಳು ಸಲ್ಲಿಕೆಯಾಗಿದ್ದು, 340 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 36 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದೇ 29ಕ್ಕೆ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿದೆ. ಚುನಾವಣೆಯ ಕೇಂದ್ರ ಬಿಂದುವಾಗಿರುವ ಮಂಡ್ಯ ಕ್ಷೇತ್ರಕ್ಕೆ ಹೆಚ್ಚಿನ ಭದ್ರತೆ ನೀಡಲು ಪರಿಶೀಲನೆ ನಡೆಸಲಾಗುವುದು ಎಂದು ಸಂಜೀವ್ ಕುಮಾರ್ ತಿಳಿಸಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಾದಗಿನಿಂದ ಈವರೆಗೂ 6.80 ಕೋಟಿ ನಗದು, 4.99 ಕೋಟಿ ಲೀಟರ್ಗೂ ಅಧಿಕ ಮದ್ಯ, 120 ಕೆ.ಜಿ ಮಾದಕ ವಸ್ತು, ಗಾಂಜಾ, 162 ಗ್ರಾಂ ತೂಕದ ಸುಮಾರು 3.5 ಕೋಟಿ ಮೌಲ್ಯದ ಚಿನ್ನಾಭರಣ, 34 ಕೆ.ಜಿ ಮೌಲ್ಯದ ಬೆಳ್ಳಿ, 43 ಲಕ್ಷದ ಗೃಹೋಪಯೋಗಿ ಮತ್ತಿತರೆ ವಸ್ತುಗಳು ಮತ್ತು 26,700 ಜಾಮೀನು ರಹಿತ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯನ್ನು ಸಂಜೀವ್ ಕುಮಾರ್ ನೀಡಿದರು.