ತುಮಕೂರು: ಕರ್ನಾಟಕ ಪರೀಕ್ಷಾ ಮಂಡಳಿಯ ಎಡವಟ್ಟು ಮುಂದುವರಿದಿದ್ದು ಡಿಪ್ಲೋಮ ವಿದ್ಯಾರ್ಥಿನಿ ಜೊತೆ ಚೆಲ್ಲಾಟ ಆಡಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಎಂಜಿನಿಯರಿಂಗ್ ಮಾಡಲು ಚಂದನಾ ಎಂಬವರು 2016 ರಲ್ಲಿ ಸಿಇಟಿ ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದರೂ ಈಗ ಕರ್ನಾಟಕ ಪರೀಕ್ಷಾ ಮಂಡಳಿ ಫಲಿತಾಂಶವನ್ನು ಬಿಡುಗಡೆ ಮಾಡದೇ ಆಟ ಆಡುತ್ತಿದೆ ಎಂದು ಚಂದನಾ ಪೋಷಕರು ಆರೋಪಿಸಿದ್ದಾರೆ.
ಯಾಕೆ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ ಎಂದು ಸಂಬಂಧಪಟ್ಟವರನ್ನು ಪ್ರಶ್ನಿಸಿದರೆ, ಅಪ್ಲಿಕೇಷನ್ ತುಂಬುವಾಗ ನೀವು ಡಿಪ್ಲೋಮ ಮೊದಲ ವರ್ಷದ ಅಂಕಪಟ್ಟಿಯನ್ನೇ ನೀಡಿಲ್ಲ. ಹಾಗಾಗಿ ರಿಸಲ್ಟ್ ಬಂದಿಲ್ಲ ಎಂದು ಉತ್ತರಿಸಿದ್ದಾರೆ.
ಆದರೆ ಚಂದನಾ ಅಪ್ಲಿಕೇಷನ್ ತುಂಬಿದ ನಂತರ ಅದರ ನಕಲಿ ಪ್ರತಿಯನ್ನು ಇಟ್ಟುಕೊಂಡಿದ್ದು ಅದರಲ್ಲಿ ಎಲ್ಲಾ ಮಾಹಿತಿಯನ್ನು ತುಂಬಿರುವ ದಾಖಲೆ ಸ್ಪಷ್ಟವಾಗಿದೆ. ಈಗ ಅಪ್ಲಿಕೇಷನ್ ಸರಿಯಿಲ್ಲ ಎಂದು ಹೇಳಿರುವ ಪರೀಕ್ಷಾ ಮಂಡಳಿ ಚಂದನಾರ ಅಪ್ಲಿಕೇಷನ್ ನೋಡಿ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದು ಯಾಕೆ ಎನ್ನುವ ಪ್ರಶ್ನೆ ಈಗ ಎದ್ದಿದೆ.
ಅಷ್ಟೇ ಅಲ್ಲದೇ ಅಲ್ಲದೆ ಅಪ್ಲಿಕೇಷನ್ ಪರಿಶೀಲನೆಯ ಕೊನೆಯ ದಿನದ ನಂತರದ ದಿನ ನೀವೇ ಮಾಹಿತಿಗಳನ್ನು ಬದಲಾಯಿಸಿದ್ದೀರಿ ಎಂದು ಐಪಿ ಅಡ್ರೆಸ್ ವೊಂದನ್ನು ಅಧಿಕಾರಿಗಳು ನೀಡಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂಗೆ ದೂರು ಸಲ್ಲಿಸಲು ಚಂದನಾ ಪೋಷಕರು ನಿರ್ಧರಿಸಿದ್ದಾರೆ.