ಬೆಂಗಳೂರು: ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ವಿರುದ್ಧ ಇಂಧನ ಸಚಿವ ಡಿಕೆಶಿ ತಿರುಗಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ವೇಣುಗೋಪಾಲ್ ಗೋ ಬ್ಯಾಕ್ ಅನ್ನೋಕೆ ಏನಿದೆ? ಕೆ.ಸಿ. ವೇಣುಗೋಪಾಲ್ ಅವರನ್ನು ಡಿಸ್ಟರ್ಬ್ ಮಾಡಿದ್ರೆ ಬಿಜೆಪಿಯವರ ಕೇಂದ್ರದ ನಾಯಕರನ್ನ ಗುರಿಯಾಗಿಟ್ಟುಕೊಂಡು ನಾವು ಅದಕ್ಕಿಂತಲೂ ಶಕ್ತವಾಗಿ ಹೋರಾಟ ಮಾಡಬೇಕಾಗುತ್ತದೆ. ಅಷ್ಟು ಶಕ್ತಿಯನ್ನು ನಮಗೆ ನಮ್ಮ ಕಾರ್ಯಕರ್ತರು ನೀಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಸಿಎಂ ಯಾತ್ರೆ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಯಾತ್ರೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಹೈಕಮಾಂಡ್ ಕೂಡ ಸರ್ಕಾರದ ಕಾರ್ಯಕ್ರಮಗಳನ್ನು ಪ್ರವಾಸದ ಮೂಲಕ ಮಾಡಿ ಎಂದು ಹೇಳಿದೆ. ಸರ್ಕಾರದ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಭಾಗಿಯಾದರೆ ಸರ್ಕಾರಿ ಕಾರ್ಯಕ್ರಮ ಆಗಲ್ಲ ಪಕ್ಷದ ವೇದಿಕೆಯಾಗುತ್ತೆ. ಪಕ್ಷದ ಅಧ್ಯಕ್ಷರು ನಾವೆಲ್ಲಾ ಸೇರಿ ಯಾತ್ರೆ ಮಾಡುತ್ತೇವೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದವರು, ಅವರೇನು ಸರ್ಕಾರದ ವತಿಯಿಂದ ಎಲ್ಲಿಯೂ ಹೋಗಿಲ್ವಾ? ಅವರಿಗೆ ಅನುಭವ ಇದೆಯೋ ಇಲ್ವೋ ಗೊತ್ತಿಲ್ಲ. ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಸರ್ಕಾರದ ಕೆಲಸಕ್ಕೆ ಸರ್ಕಾರಿ ಕಾರಿನಲ್ಲೇ ಹೋಗಬೇಕು ಎಂದರು. ನೀತಿ ಸಂಹಿತೆ ಬರುವವರೆಗೂ ನಾವು ಸರ್ಕಾರಿ ಕಾರಿನಲ್ಲೇ ಹೋಗುತ್ತೇವೆ ಎಂದರು.