ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಆರಂಭವಾಗಿದೆ. ಆದರೆ ಪ್ರಯಾಣಿಕರು ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಮತದಾನ ಮಾಡುವುದಕ್ಕೆ ಊರಿಗೆ ತೆರಳಲು ಬಸ್ ಇಲ್ಲದೆ ಪ್ರಯಾಣಿಕರು ಪರದಾಡಿದ ಸ್ಥಿತಿ ನಗರದ ಮೆಜೆಸ್ಟಿಕ್ ನಲ್ಲಿ ಕಂಡು ಬಂದಿದೆ. ರಾತ್ರಿಯಿಂದಲೇ ಊರಿಗೆ ತೆರಳಲು ಸಜ್ಜಾಗಿದ್ದ ಪ್ರಯಾಣಿಕರು ಸಂಜೆಯಿಂದ ಕಾದು ಕುಳಿತ್ರೂ, ಬಸ್ ವ್ಯವಸ್ಥೆ ಇಲ್ಲ ಪರಿಣಾಮವಾಗಿ ಪ್ರಯಾಣಿಕರು ಮೆಜೆಸ್ಟಿಕ್ ನ ಡಿಪೋದ ಮುಂದೆ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ದಾರೆ.
ಅಷ್ಟೇ ಅಲ್ಲದೇ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಂಚರಿಸುತ್ತಿದ್ದ ಬಸ್ ಗಳನ್ನ ತಡೆಯಲು ಮುಂದಾಗಿದ್ದಾರೆ. ಒಂದು ತಿಂಗಳು ಮುಂಚಿತವಾಗಿ ಬಸ್ಗಾಗಿ ಟಿಕೆಟ್ ಬುಕ್ ಮಾಡಿದರೂ ಬಸ್ ವ್ಯವಸ್ಥೆ ಇರಲಿಲ್ಲ.
ಸರ್ಕಾರ ರಚನೆ ಮಾಡುವುದಕ್ಕೆ ನಮ್ಮ ವೋಟ್ ಬೇಕು. ಜನರ ಸಮಸ್ಯೆ ಪರಿಹರಿಸುವುದಕ್ಕೆ ಯಾವ ಅಧಿಕಾರಿಯೂ ಬರಲ್ಲ. ಇಂತಹವರಿಗೆ ನಾವು ಮತದಾನ ಮಾಡಬೇಕು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.