ಬೆಂಗಳೂರು: ರಾಹುಲ್ ಗಾಂಧಿ(Rahul Gandhi) ತಂಡ ನಡೆಸಿದ ಚುನಾವಣಾ ಸಮೀಕ್ಷೆಗೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಸಿಡಿಮಿಡಿಗೊಂಡಿರುವ ವಿಚಾರ ಈಗ ಮೂಲಗಳಿಂದ ತಿಳಿದುಬಂದಿದೆ.
ಹೌದು.ಕರ್ನಾಟಕ ವಿಧಾನಸಭಾ ಚುನಾವಣೆಯ(Karnataka Vidhan Sabha Election) ಸಂಬಂಧ ಕಾಂಗ್ರೆಸ್ ತಂಡ ಕೋಟಿ ಕೋಟಿ ಖರ್ಚು ಮಾಡಿ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ವ್ಯಕ್ತವಾದ ತನ್ನ ಬಾಡಿ ಲಾಂಗ್ವೇಜ್ ಬಗ್ಗೆ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ.
ವರದಿಯಲ್ಲಿ ಏನಿದೆ?
ಸಿದ್ದರಾಮಯ್ಯ ಮಾಸ್ ಲೀಡರ್ ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಬಾಡಿ ಲಾಂಗ್ವೇಜ್ನಿಂದ ಪಕ್ಷಕ್ಕೆ ಸಮಸ್ಯೆಯಾಗಬಹುದು. ಬಿಜೆಪಿ ಮತ್ತು ಹಿಂದುತ್ವದ ವಿಷಯ ಬಂದಾಗ ಆಲೋಚನೆ ಮಾಡಿ ಮಾತನಾಡಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ ವಿಚಾರವನ್ನೇ ಮುಂದಿಟ್ಟುಕೊಂಡು ಬಿಜೆಪಿ ತಿರುಗೇಟು ನೀಡಬಹುದು. ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ವರ್ಷವಿಡೀ ಶಾಲೆಗೆ ಹೋಗಲು ನಿರ್ಬಂಧಿಸಿದ ತಾಲಿಬಾನ್ ಪರೀಕ್ಷೆ ಬರೆಯಲು ಅನುಮತಿ
ಕಳೆದ ಚುನಾವಣೆಯಲ್ಲೂ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಹಿಂದುತ್ವದ ಅಸ್ತ್ರವನ್ನೇ ಬಳಸಿತ್ತು. ಈ ಚುನಾವಣೆಯಲ್ಲೂ ಬಿಜೆಪಿ ಇದನ್ನೇ ಬಳಸುವ ಸಾಧ್ಯತೆಯಿದೆ. ಈ ಕಾರಣಕ್ಕೆ ತನ್ನ ಹೇಳಿಕೆಯಿಂದ ಬಿಜೆಪಿ ಲಾಭವಾಗದಂತೆ ಸಿದ್ದರಾಮಯ್ಯ ನೋಡಿಕೊಳ್ಳಬೇಕು. ಈ ಚುನಾವಣೆಯ ಗೆಲುವಿಗೆ ಬಾಡಿ ಲಾಂಗ್ವೇಜ್ ಬದಲಿಸಿಕೊಂಡರಷ್ಟೇ ಅನುಕೂಲಕರ. ಒಂದು ವೇಳೆ ಸಿದ್ದರಾಮಯ್ಯ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳದಿದ್ದರೆ ಪಕ್ಷಕ್ಕೆ ಕಷ್ಟವಾಗಬಹುದು ಎಂದು ಸಮೀಕ್ಷಾ ತಂಡ ವರದಿ ನೀಡಿದೆ.
ಈ ಸಮೀಕ್ಷಾ ತಂಡದ ವರದಿಗೆ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ. ಚುನಾವಣೆ ಗೆಲ್ಲುವುದಕ್ಕೂ ನನ್ನ ಬಾಡಿ ಲಾಂಗ್ವೇಜ್ಗೂ ಏನು ಸಂಬಂಧ? ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾನು ಹೇಗಿದ್ದೇನೋ ಹಾಗೆಯೇ ಇರುತ್ತೇನೆ. ಚುನಾವಣೆಗಾಗಿ ನಾನು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾವವೂ ನನ್ನದೆ, ಭಾವವೂ ನನ್ನದೆ ಎಂದು ಹೇಳಿ ಗರಂ ಆಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.