ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಎಂತಹ ನಾಯಕರಾದರು ಕೂಡ ಇಲ್ಲಿ ನನ್ನಂತೆ ಒಬ್ಬ ಅಭ್ಯರ್ಥಿ ಅಷ್ಟೇ ಎಂದು ಸಚಿವ ವಿ.ಸೋಮಣ್ಣ V.Somanna) ಗುರುವಾರ ಮೈಸೂರಿನಲ್ಲಿ (Mysuru) ಹೇಳಿದ್ದಾರೆ.
ಸುತ್ತೂರು ಮಠಕ್ಕೆ (Suttur Math) ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಹಾಗೂ ಸಿದ್ದರಾಮಯ್ಯ ಒಂದೇ ಗರಡಿಯಲ್ಲಿ ಪಳಗಿದವರು. ವರುಣಾ ಕ್ಷೇತ್ರದಲ್ಲಿ ಈಗ ನಾನು ನೆಪ ಮಾತ್ರ. ಪಕ್ಷದಲ್ಲಿ ಯಾವ ಮುಖಂಡರು ಚಿಕ್ಕವರಲ್ಲ ಹಾಗೂ ದೊಡ್ಡವರಲ್ಲ. ಇಲ್ಲಿ ಪಕ್ಷ ಹಾಗೂ ಕಾರ್ಯಕರ್ತರು ದೊಡ್ಡವರು ಎಂದಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ನಂತರ ಯಾದಗಿರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆಗೆ ಟಿಕೆಟ್
ಪ್ರಚಾರಕ್ಕೆ ಯಾರು ಬರುತ್ತಾರೆ, ಯಾರು ಬರುವುದಿಲ್ಲ ಎಂಬ ಚರ್ಚೆ ಅನಗತ್ಯ. ಎಲ್ಲರೂ ಸೇರಿಯೇ ನನ್ನನ್ನು ವರುಣಾ ಕ್ಷೇತ್ರದಲ್ಲಿ ಗೆಲ್ಲಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ನನಗೆ 75 ವರ್ಷವಾದ ಮೇಲೆ ಬಿಜೆಪಿಯಲ್ಲಿ ಯಾವ ಸ್ಥಾನ ಸಿಗುತ್ತದೆ ಎಂಬುದು ನನಗೆ ಗೊತ್ತು. ನಾನು ಇಲ್ಲಿ ಶಾಶ್ವತ ಅಲ್ಲ. ಹಾಗೆಂದು ಇದು ನನ್ನ ಕೊನೆಯ ಚುನಾವಣೆ ಅಥವಾ ರಾಜಕೀಯ ನಿವೃತ್ತಿ ಅಲ್ಲ. ನಮ್ಮ ಪಕ್ಷದ ನಿಯಮಗಳಂತೆ ನಾನು ಇರುತ್ತೇನೆ. ಪಕ್ಷದೊಳಗೆ ಯಾರಾದರೂ ಇಲ್ಲ ಸಲ್ಲದ್ದನ್ನು ಮಾತಾಡುತ್ತಾರೆ. ಅದನ್ನು ದೊಡ್ಡ ವಿಚಾರವಾಗಿ ಬಿಂಬಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಗೋವಿಂದರಾಜ ನಗರದ ಟಿಕೆಟ್ ವಿಚಾರ ಸಂಜೆಯೊಳಗೆ ಬಗೆಹರಿಯಲಿದೆ. ನಾಳೆಯಿಂದ ವರುಣಾ ಕ್ಷೇತ್ರದ ಪ್ರಚಾರ ಆರಂಭಿಸುತ್ತೇನೆ. ಕ್ಷೇತ್ರದ ಪ್ರತಿ ಹಳ್ಳಿಯನ್ನು ಸುತ್ತುತ್ತೇನೆ. ಏ.17 ರಂದು ವರುಣಾ (Varuna) ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ. ಏ.19 ರಂದು ಚಾಮರಾಜನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಕೀಯಕ್ಕೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಗುಡ್ ಬೈ