ಹುಬ್ಬಳ್ಳಿ: ಶೆಟ್ಟರ್ (Jagadish Shettar) ನಮ್ಮ ತಂಡದಿಂದ ಹೊರಗೆ ಹೋಗಿದ್ದರಿಂದ ನಮಗೆ ಯಾವುದೇ ನಷ್ಟವಿಲ್ಲ. ನಾವು ಅವರಿಗೆ ನಿವೃತ್ತಿ ಹೊಂದಲು ಹೇಳಿದ್ದೆವು. ಆದರೆ ಅವರು ಬೇರೆ ತಂಡದಲ್ಲಿ ಆಡುತ್ತೇನೆ ಎಂದು ಹೋಗಿದ್ದಾರೆ. ಆದರೆ ಈ ಸಲ ಕಪ್ ನಮ್ದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi), ಜಗದೀಶ್ ಶೆಟ್ಟರ್ಗೆ ಟಾಂಗ್ ನೀಡಿದ್ದಾರೆ.
ಶೆಟ್ಟರ್ ಕಾಂಗ್ರೆಸ್ (Congress) ಸೇರ್ಪಡೆಯಿಂದ ಬಿಜೆಪಿ (BJP) ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂಬ ವಿಚಾರದ ಕುರಿತು ಹುಬ್ಬಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂಡದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಮುಂಬೈ ಕರ್ನಾಟಕ ಭಾಗದಲ್ಲಿ ನಮ್ಮ ಸ್ಟ್ರೈಕ್ ರೇಟ್ ಜಾಸ್ತಿಯಿದೆ. ಅದು ಮತ್ತೆ ಮುಂದುವರೆಯಲಿದೆ. ತಂಡದ ಹಳೇ ಕ್ರೀಡಾಪಟುಗಳು ನಿವೃತ್ತಿ ಹೊಂದುತ್ತಾರೆ. ಹೊಸ ಕ್ರೀಡಾಪಟುಗಳು ಉತ್ಸಾಹದಿಂದ ಆಡಿ ನಮ್ಮನ್ನು ಗೆಲ್ಲಿಸುತ್ತಾರೆ. ಶೆಟ್ಟರ್ ಕಾಂಗ್ರೆಸ್ಗೆ ಹೋಗಿರುವುದರಿಂದ ನಮಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಲ್ಪನೆ ಮತ್ತು ಸ್ವಪ್ನ ಕಾಣಲು ಎಲ್ಲರಿಗೂ ಹಕ್ಕಿದೆ. ಅವರೂ ಕಾಣಲಿ ಬಿಡಿ. ಆದರೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ನಿಂದ ನಾವು ಗೆಲ್ಲುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿ ಶಾಸಕನ ಗೆಲುವಿಗೆ ವಿಚಿತ್ರ ಹರಕೆ – 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ ಫ್ಯಾನ್ಸ್
ಸೆಂಟ್ರಲ್ ಟಿಕೆಟ್ ನಿರ್ಣಯ ಅಮಿತ್ ಶಾ ಮತ್ತು ಮೋದಿಯವರದ್ದು. ರಾಜ್ಯಸಭಾ ಮತ್ತು ಅದಕ್ಕಿಂತ ಹೆಚ್ಚಿನ ಸ್ಥಾನವನ್ನು ನೀಡುತ್ತೇವೆ. ನಿಮಗೆ ಯಾವ ಸ್ಥಾನ ಬೇಕು ಹೇಳಿ ಎಂದು ಅಮಿತ್ ಶಾ ಮತ್ತು ಮೋದಿಯವರೇ ಶೆಟ್ಟರ್ಗೆ ಆಫರ್ ನೀಡಿದ್ದರು. ಆದರೆ ಶೆಟ್ಟರ್ ಅದನ್ನು ಒಪ್ಪದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಬಿಎಸ್ವೈ ಕಿಡಿ
ಲಿಂಗಾಯತ ಸಮುದಾಯ ನಮಗೆ ಅಸ್ತ್ರ ಅಲ್ಲ. ಲಿಂಗಾಯತರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ಪಕ್ಷಕ್ಕೆ ಅಥವಾ ರಾಹುಲ್ ಗಾಂಧಿಯವರಿಗೆ ಲಿಂಗಾಯತರ ಮೇಲೆ ಪ್ರೀತಿಯಿದ್ದರೆ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎನ್ನಲಿ ನೋಡೋಣ. ನಾವು ನಾಲ್ಕು ಜನ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಚುನಾವಣೆಯ ನಂತರ ನಾಯಕತ್ವವನ್ನು ನಿರ್ಧಾರ ಮಾಡುತ್ತೇವೆ. ಬಸವರಾಜ್ ಬೊಮ್ಮಾಯಿಯವರ ಮಾರ್ಗದರ್ಶನದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರು. ಇದನ್ನೂ ಓದಿ: ಬಿಜೆಪಿಯವರು ಚುನಾವಣಾ ಪ್ರಚಾರಕ್ಕೆ ಅಮೆರಿಕಾ, ರಷ್ಯಾ ಪ್ರೆಸಿಡೆಂಟ್ನ್ನು ಕರ್ಕೊಂಡು ಬರಲಿ: ಹೆಚ್ಡಿ ರೇವಣ್ಣ ಟಾಂಗ್
ಲಿಂಗಾಯತ ಸಿಎಂ ಭ್ರಷ್ಟ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಲಿಂಗಾಯತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಇನ್ನೂ ಕ್ಷಮೆ ಕೇಳಿಲ್ಲ. ಅವರು ಕೂಡಲೇ ಕ್ಷಮೆಯಾಚಿಸಬೇಕು. ಅವರು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗಕ್ಕೂ ಸಹ ದೂರುಗಳು ಸಲ್ಲಿಕೆಯಾಗುತ್ತಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ರೇಡ್