ಮೈಸೂರು: ಈಶ್ವರಪ್ಪ (KS Eshwarappa) ಅಂತಾ ಒಬ್ಬ ದಡ್ಡ ಇದ್ದಾನೆ. ಅವನಿಗೆ ದಿನವೂ ಹಣ ಎಣಿಸೋದೆ ಕೆಲಸವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು.
ವರುಣಾ (Varuna) ಕ್ಷೇತ್ರದ ಬಿಳುಗಲಿ ಗ್ರಾಮದಲ್ಲಿ ಮಾತನಾಡಿದ ಅವರು, ತನ್ನ ಪಕ್ಷದ ಕಾರ್ಯಕರ್ತನಿಂದಲೇ ಈಶ್ವರಪ್ಪ ಕಮಿಷನ್ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲದೇ ಬೊಮ್ಮಾಯಿ (Basavaraj Bommai) ಮಾತು ಎತ್ತಿದ್ದರೆ ಧರ್ಮರಾಯನ ಥರ ಮಾತಾಡುತ್ತಾರೆ. 40% ಸರ್ಕಾರ ಇದು. ಬೆಂಗಳೂರಿನಲ್ಲಿ (Bengaluru) ಇದು 50% ಸರ್ಕಾರ. ಕಮಿಷನ್ಗೆ ದಾಖಲೆ ಕೇಳುತ್ತಾರೆ. ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಜೈಲಿಗೆ ಹೋಗಿದ್ದು ಹಾಗೆ? ಇಂಥವರಿಗೆ ಮತ ಹಾಕಬಾರದು ಎಂದು ಕಿಡಿಕಾರಿದರು.
ಇವರ ಮನೆ ಹಾಳಾಗ, ಇವರು ಬಡವರಿಗೆ ಒಂದು ಮನೆ ಕೊಡಲಿಲ್ಲ. ನಾವು ಅಧಿಕಾರದಲ್ಲಿ ಇದ್ದಾಗ 15 ಲಕ್ಷ ಮನೆ ಕಟ್ಟಿಸಿ ಕೊಟ್ಟಿದ್ವಿ. ನಾವು ಅಧಿಕಾರಕ್ಕೆ ಬಂದರೆ 20 ಲಕ್ಷ ಮನೆ ಕಟ್ಟಿಸಿ ಕೊಡುತ್ತೇವೆ. ಆದರೆ ಯಡಿಯೂರಪ್ಪ ಮಗನ ಮನೆಯಲ್ಲೇ ಪೊಲೀಸ್ ನೇಮಕಾತಿ ನಡೆದಿದೆ. ಒಂದೊಂದು ಪೋಸ್ಟ್ಗೆ 50 ರಿಂದ 80 ಲಕ್ಷ ವಸೂಲಿ ಮಾಡಿದ್ದಾರೆ. ಈ ಆರೋಪ ನಾನು ಮಾಡಿದ್ದಲ್ಲ. ಬಿಜೆಪಿಯ ಯತ್ನಾಳ್ ಮಾಡಿದ್ದು. ಇಂತಹ ಭ್ರಷ್ಟ ಸರ್ಕಾರ ನಾನು ಯಾವತ್ತೂ ನೋಡಿಲ್ಲ. ಆರ್ಎಸ್ಎಸ್ನವರು ಯಾವತ್ತೂ ಸಂವಿಧಾನ ಪರ ಅಲ್ಲ. ಅಹಿಂದ ವರ್ಗ, ರೈತರು, ಮಹಿಳೆಯರು ಯಾರು ಬಿಜೆಪಿಗೆ ಒಂದು ಮತವೂ ಹಾಕಬಾರದು ಎಂದು ಹೇಳಿದರು.
ಬಿಜೆಪಿ ಅವರು ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ಚುನಾವಣೆಗೆ ಚೀಲ ಚೀಲ ಹಣ ತುಂಬಿಕೊಂಡು ಬರುತ್ತಾರೆ. ಆದಾಯ ತೆರಿಗೆ ಇಲಾಖೆ ಅವರಿಗೆ ಇದು ಕಣ್ಣಿಗೆ ಕಾಣುವುದಿಲ್ಲ. ಉಪ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರದಲ್ಲಿ 20 – 30 ಕೋಟಿ ರೂ. ವೆಚ್ಚ ಮಾಡಿತ್ತು. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಚುನಾವಣೆ ಮಾಡಬೇಕು. ವಿರೋಧ ಪಕ್ಷದವರಿಗೆ ಚುನಾವಣಾ ಆಯೋಗ ಅನ್ಯಾಯ ಮಾಡಿ ಆಡಳಿತ ಪಕ್ಷದವರಿಗೆ ನ್ಯಾಯ ಮಾಡಬಾರದು ಎಂದು ಮನವಿ ಮಾಡಿದರು.
ನಾನು 7 ಕೆಜಿ ಅಕ್ಕಿ ಕೊಡ್ತಿದ್ದೆ. ಇವರು ಅದನ್ನು 5 ಕೆಜಿಗೆ ಇಳಿಸಿದ್ದಾರೆ. ಇವರ ಅಪ್ಪನ ಮನೆಯಿಂದ ಹಣ ತರುತ್ತಿದ್ದರಾ? ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ. ಎಲ್ಲಾ ಜನರಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತೇವೆ. ನನಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ನಿಮಗೂ ಫ್ರೀ. ನಾವು ಕೊಟ್ಟ ಭರವಸೆ ಈಡೇರಿಸುತ್ತೇವೆ. ಭರವಸೆ ಈಡೇರಿಸದೇ ಇದ್ದರೆ ಒಂದು ಕ್ಷಣವೂ ಆಡಳಿತದಲ್ಲಿ ಇರಲ್ಲ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಬೇಕೆಂಬುದು ನನ್ನ ಆಸೆ: ವರ್ತೂರು ಪ್ರಕಾಶ್
ನಾನು ಬಾದಾಮಿ ಕ್ಷೇತ್ರ ದೂರ ಅಂದಿದ್ದರಿಂದ ಹೈಕಮಾಂಡ್ ಅಳೆದು ತೂಗಿ ನನಗೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಅಂತಾ ಹೇಳಿದ್ದಾರೆ. ನಾನು ಮತ ಕೇಳಲು ಬರಲ್ಲ. ಯತೀಂದ್ರ ಮತ ಕೇಳಲು ಬರುತ್ತಾರೆ. ಹೈಕಮಾಂಡ್ ತೀರ್ಮಾನ ಮಾಡಿದ ಮೇಲೆ ಯತೀಂದ್ರ ದೊಡ್ಡ ಮನಸ್ಸು ಮಾಡಿ ನನ್ನ ಟಿಕೆಟ್ ಸ್ವಾಗತಿಸಿದ್ದಾರೆ. ಮತ್ತೆ ಸರ್ಕಾರ ನಮ್ಮ ಕೈಯಲ್ಲಿ ಬರುತ್ತದೆ. ನಾನು ರಾಜ್ಯವೆಲ್ಲ ಸುತ್ತಿ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ: ಮಲ್ಲಿಕಾರ್ಜುನ ಖರ್ಗೆ