ಬೆಳಗಾವಿ: ಸವದತ್ತಿ ಮತಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಅಪ್ಪ, ಈ ಚುನಾವಣೆಯಲ್ಲಿ (Election) ಮಗನ ಬಂಡಾಯ ಎದುರಾಗಿದೆ. ಸವದತ್ತಿ (Saundatti) ಕ್ಷೇತ್ರದ ಕಾಂಗ್ರೆಸ್ಗೆ ಈ ಸಲವೂ ಚೋಪ್ರಾ ಕುಟುಂಬ ತಲೆನೋವಾಗಿ ಪರಿಣಮಿಸಿದೆ.
ಸವದತ್ತಿ ಮತಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿಯಾಗಿದ್ದ ಸೌರಭ್ ಚೋಪ್ರಾ (Sourab Chopra) ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ಸವದತ್ತಿ ಪಟ್ಟಣದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಬಳಿಕ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡುತ್ತಿದ್ದೇನೆ ಎನ್ನುವ ಮೂಲಕ ಸವದತ್ತಿ ಕ್ಷೇತ್ರದಲ್ಲಿ ಮತ್ತೊಮ್ಮೆ ಬಂಡಾಯದ ಬೆಂಕಿಯನ್ನು ಸೌರಭ್ ಚೋಪ್ರಾ ಹೊತ್ತಿಸಿದ್ದಾರೆ. ಇದನ್ನೂ ಓದಿ: KMFಗೆ ಬೊಮ್ಮಣ್ಣ ಕೈ ಹಾಕಿದ್ರೆ ರಕ್ತ ಕ್ರಾಂತಿಯಾಗುತ್ತೆ: ಸಿಎಂ ಇಬ್ರಾಹಿಂ ಎಚ್ಚರಿಕೆ
ಕಾಂಗ್ರೆಸ್ ನಾಯಕರು ಈ ಚುನಾವಣೆಗೆ ನನಗೆ ಟಿಕೆಟ್ ನೀಡುವ ವಿಶ್ವಾಸ ಹೊಂದಿದ್ದೆ. ಸವದತ್ತಿ ಕ್ಷೇತ್ರದ ಜನರ ಭಾವನೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ಅವರ ಆಶಯದಂತೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.
2013 ಹಾಗೂ 2018 ರಲ್ಲಿ ನಮ್ಮ ತಂದೆಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತ್ತು. ಈ ಕಾರಣಕ್ಕೆ 2023ರಲ್ಲಿ ನನಗೆ ಸವದತ್ತಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ ಪಕ್ಷದ ಮುಖಂಡರು ನನಗೆ ಟಿಕೆಟ್ ನೀಡಲಿಲ್ಲ. ಕಾಂಗ್ರೆಸ್ ನಾಯಕರ ನಿರ್ಧಾರ ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿದೆ. ನಮ್ಮ ಕ್ಷೇತ್ರದಲ್ಲಿರುವ ಸಣ್ಣ ಮಗುವೂ ಸಹ ಚೋಪ್ರಾಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳುತ್ತದೆ. ಟಿಕೆಟ್ಗೆ ಅರ್ಜಿ ಸಲ್ಲಿಸುವ ಮುನ್ನ ನಮ್ಮ ನಾಯಕರು ಮೂರು ಷರತ್ತು ಹಾಕಿದ್ದರು. ಸರ್ವೇನಲ್ಲಿ ಹೆಸರಿರಬೇಕು, ಯುವಕರಾಗಿರಬೇಕು, ಕಳೆದ ಚುನಾವಣೆಯಲ್ಲಿ 10 ಸಾವಿರ ಮತಗಳ ಅಂತರದೊಳಗೆ ಸೋತಿದ್ದವರಿಗೆ ಆದ್ಯತೆ ನೀಡುತ್ತೇವೆ ಎಂದಿದ್ದರು.
ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಸಿದವರಲ್ಲಿ ನಾನೇ ಅತ್ಯಂತ ಕಿರಿಯವನಾಗಿದ್ದೇನೆ. ಯುವಕರ ಕೋಟಾದಲ್ಲಾದರೂ ನನಗೆ ಸವದತ್ತಿ ಕಾಂಗ್ರೆಸ್ ಟಿಕೆಟ್ ಸಿಗಬೇಕಿತ್ತು. ಸರ್ವೆನಲ್ಲಿ ನನ್ನ ಹೆಸರಿದೆ ಆದರೂ ನನಗೆ ಟಿಕೆಟ್ ಸಿಗಲಿಲ್ಲ. ಎಲ್ಲಾ ಅರ್ಹತೆಗಳೂ ನನ್ನಲ್ಲಿದ್ದರೂ ಸಹ ನನ್ನನ್ನು ಪರಿಗಣಿಸಲಿಲ್ಲ. ಈ ಕಾರಣದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಅನಿವಾರ್ಯ ಎಂಬ ನಿರ್ಧಾರ ಹೊರಹಾಕಿದ್ದಾರೆ. ಇದನ್ನೂ ಓದಿ: ಗಂಗಾವತಿ ಜನ ಫುಟ್ಬಾಲ್ ಆಡಿದ್ರೆ ಸೀದಾ ಬಳ್ಳಾರಿಗೆ ಹೋಗಿ ಬೀಳ್ತಾರೆ- ರೆಡ್ಡಿ ಚಿಹ್ನೆ ಬಗ್ಗೆ ಅನ್ಸಾರಿ ವ್ಯಂಗ್ಯ