ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚಲನಚಿತ್ರ ನಟರದ್ದೇ ಅಬ್ಬರ. ರೆಬೆಲ್ ಸ್ಟಾರ್ ಅಂಬರೀಶ್ (Ambareesh), ನಟಿ ರಮ್ಯಾ (Ramya), ಹಿರಿಯ ನಟಿ ಸುಮಲತಾ (Sumalatha), ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೀಗೆ ಸ್ಟಾರ್ ಗಳ ಚುನಾವಣಾ ಸ್ಪರ್ಧೆಯ ಪಟ್ಟಿ ದೊಡ್ಡದಿದೆ.
ಸೋತು ಗೆದ್ದವರು ಬಳಷ್ಟು ಜನ ಮಂಡ್ಯ ಚುನಾವಣಾ (Mandya Election) ಅಖಾಡದಲ್ಲಿ ಸೋತಿದ್ದಾರೆ, ಗೆದ್ದಿದ್ದಾರೆ. ಆದರೆ ಅವಿಭಜಿತ ಮೈಸೂರು ಜಿಲ್ಲೆಯ ಮತದಾರ ಚಲನಚಿತ್ರ ರಂಗದವರಿಗೆ ಮನ್ನಣೆಯೇ ನೀಡಿಲ್ಲ. ಮೈಸೂರಿನವರಾದ ಖ್ಯಾತ ನಟ, ನಿರ್ಮಾಪಕ ಎಂ.ಪಿ. ಶಂಕರ್ (MP Shankar), ಮೂಲತಃ ಹುಣಸೂರಿನವರಾದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ (Dwarakeesh), ಕೊಳ್ಳೇಗಾಲದವರಾದ ನಟ, ನಿರ್ದೇಶಕ ಎಸ್. ಮಹೇಂದರ್ (S Mahender) ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಇದನ್ನೂ ಓದಿ: ರೇವಣ್ಣಗೆ ಭವಾನಿಯವರ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ, ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ – ಪ್ರತಾಪ್ಸಿಂಹ ವ್ಯಂಗ್ಯ
ಎಂ.ಪಿ. ಶಂಕರ್ ಅವರು 1994 ರಲ್ಲಿ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಎಸ್. ಬಂಗಾರಪ್ಪ ಅವರ ಕೆಸಿಪಿ ಅಭ್ಯರ್ಥಿಯಾಗಿ ಕೇವಲ 785 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು. ಆಗ ಗೆದ್ದಿದ್ದು ಬಿಜೆಪಿ ಎ. ರಾಮದಾಸ್ (A Ramdas). 2004 ರಲ್ಲಿ ದ್ವಾರಕೀಶ್ ಅವರು ಹುಣಸೂರಿನಿಂದ ವಿಜಯಸಂಕೇಶ್ವರರ ಕನ್ನಡನಾಡು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, 2264 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್ನ ಜಿ.ಟಿ. ದೇವೇಗೌಡ ಗೆದ್ದರು.
2008 ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಎಸ್. ಮಹೇಂದರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 25,533 ಮತಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದರು. ಆದರೆ ಗೆದ್ದಿದ್ದು ಕಾಂಗ್ರೆಸ್. ಇದಾದ ನಂತರ ಮಹೇಂದರ್ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದರು. ಆದರೆ ಬಿಜೆಪಿಯಲ್ಲಿದ್ದಷ್ಟು ರಾಜಕೀಯವಾಗಿ ಸಕ್ರಿಯರಾಗಿಲ್ಲ.