ಮಂಡ್ಯ: ಸುಮಲತಾ (Sumalatha Ambareesh) ಅವರ ಅನೈತಿಕ ಬೆಂಬಲದಿಂದ ಮೇಲುಕೋಟೆ (Melukote) ಕ್ಷೇತ್ರದಲ್ಲಿ ಬಿಜೆಪಿಗೆ (BJP) ಕಡಿಮೆ ಮತ ಬಂದಿದೆ. ಮೇಲುಕೋಟೆ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಸುಮಲತಾ ಅವರ ಹೇಳಿಕೆಗೆ ನನ್ನ ಧಿಕ್ಕಾರ ಎಂದು ಮೇಲುಕೋಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ.ಇಂದ್ರೇಶ್ (Dr. Indresh) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಮಂಡ್ಯ (Mandya) ಜಿಲ್ಲೆಯಲ್ಲಿ ಹೊಸ ಅಧ್ಯಾಯ ಬರೆಯಬೇಕೆಂದು ಹೊರಟಿತ್ತು. ಆದರೆ ಬಿಜೆಪಿಗೆ ಮಂಡ್ಯದಲ್ಲಿ ತೀವ್ರ ಆಘಾತವಾಗಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಇಂದ್ರೇಶ್ 6,470 ಮತಗಳನ್ನು ಪಡೆದುಕೊಳ್ಳುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಪ್ತಚರ ಮಾಹಿತಿ ಪ್ರಕಾರ 38 ಸಾವಿರ ಮತಗಳನ್ನು ಪಡೆದುಕೊಳ್ಳುತ್ತೇನೆ ಎಂದು ಹೇಳಲಾಗುತ್ತಿತ್ತು. ಆದರೆ ಸುಮಲತಾ ಅಂಬರೀಶ್ ಅವರು ರೈತ ಸಂಘಕ್ಕೆ ನೀಡಿದ ಅನೈತಿಕ ಬೆಂಬಲದಿಂದ ನಾನು ಕಡಿಮೆ ಮತಗಳನ್ನು ಗಳಿಸಲು ಸಾಧ್ಯವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: `ಸಿದ್ದು ಪೂರ್ಣಾವಧಿ ಸಿಎಂ’ – ಕಾಂಗ್ರೆಸ್ ಒಳಗೆ ಬೆಂಕಿ ಹಚ್ಚಿದ ಎಂಬಿಪಿ
ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದು ಸುಮಲತಾ ಹೇಳಿದ್ದರು. ಚುನಾವಣೆಗೆ (Election) 6 ದಿನಗಳ ಮುಂಚೆ ಸುಮಲತಾ ಅವರ ಹೇಳಿಕೆಗೆ ನನ್ನ ಧಿಕ್ಕಾರ. ದರ್ಶನ್ ಪುಟ್ಟಣ್ಣ (Darshan Puttanna) ಚುನಾವಣೆಯಲ್ಲಿ ಗೆದ್ದರೆ ಖುಷಿ. ಮೇಲುಕೋಟೆಯಲ್ಲಿ ಗೆಲ್ಲುವ ಅಭ್ಯರ್ಥಿ ಯಾರು ಎಂದು ನೋಡಬೇಕು. ನಮ್ಮ ಗುರಿ ಜೆಡಿಎಸ್ (JDS) ಸೋಲಿಸುವುದರ ಮೂಲಕ ರೈತ ಸಂಘದ ಪರ ಎಂದು ಸುಮಲತಾ ಮಾತನಾಡಿದ್ದರು ಎಂದು ಸುಮಲತಾ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಇಂದಿನಿಂದ 2,000 ಮುಖಬೆಲೆ ನೋಟು ವಿನಿಮಯ ಪ್ರಕ್ರಿಯೆ ಆರಂಭ
ಈ ವಿಚಾರದ ಬಗ್ಗೆ ಪಕ್ಷದ ಸಭೆಯಲ್ಲಿ ಮಾತನಾಡುತ್ತೇನೆ. ಸುಮಲತಾ ಮಾಡಿರುವ ಕೆಲಸ ಯಾರು ಒಪ್ಪಲ್ಲ. ಸುಮಲತಾ ಹೇಳಿಕೆಯ ನಂತರ ಕ್ಷೇತ್ರದಲ್ಲಿ ಬಿಜೆಪಿಗೆ ಮತ ಕಡಿಮೆಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ಆಯ್ಕೆಗಿಂತಲೂ ಕಗ್ಗಂಟಾದ ವಿಪಕ್ಷ ನಾಯಕನ ಆಯ್ಕೆ