ಮಂಡ್ಯ: ಸಕ್ಕರೆನಾಡು ಮಂಡ್ಯ (Mandya) ಜಿಲ್ಲೆ ಎಂದರೆ ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಯಾಗಿದೆ. ಇಲ್ಲಿನ ರಾಜಕೀಯ ಚಿತ್ರಣ ಸಂಪೂರ್ಣ ಅವಲಂಬಿತವಾಗಿರುವುದು ಒಕ್ಕಲಿಗ ಸಮುದಾಯದ ಮೇಲೆ. ಒಕ್ಕಲಿಗ ಸಮುದಾಯದವರು ರಾಜ್ಯದಲ್ಲಿ ಸಿಎಂ (Chief Minister) ಆಗುತ್ತಾರೆ ಎಂದ್ರೆ ಮಂಡ್ಯ ಜಿಲ್ಲೆಯೇ ಪ್ರಮುಖ ನಿರ್ಣಾಯಕವಾಗುತ್ತದೆ. ಇದಕ್ಕೆ ಹತ್ತು ಹಲವು ಚುನಾವಣೆಗಳು ನಿದರ್ಶನವಾಗಿವೆ.
ಮಂಡ್ಯ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳು ಇವೆ. ಈ 7 ಕ್ಷೇತ್ರಗಳ ಪೈಕಿ ಮಳವಳ್ಳಿ ಮೀಸಲು ಕ್ಷೇತ್ರವಾಗಿದೆ. ಮಳವಳ್ಳಿ ಕ್ಷೇತ್ರವನ್ನು ಹೊರತುಪಡಿಸಿ ಉಳಿದ 6 ಕ್ಷೇತ್ರಗಳಲ್ಲಿ ಒಕ್ಕಲಿಗ ಮತದಾರರೇ ನಿರ್ಣಾಯಕರಾಗಿದ್ದಾರೆ. ಹೀಗಾಗಿಯೇ ಮೂರು ಪಕ್ಷಗಳು ಒಕ್ಕಲಿಗರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತವೆ. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮೇಲುಕೋಟೆ, ಕೆ.ಆರ್.ಪೇಟೆ, ನಾಗಮಂಗಲ ಈ ಕ್ಷೇತ್ರಗಳಲ್ಲಿ ಈಗ ಮೂರು ಪಕ್ಷದವರು ಅಭ್ಯರ್ಥಿಯನ್ನಾಗಿ ಮಾಡುತ್ತಿರುವುದು ಹಾಗೂ ಹಿಂದಿನ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಿರುವುದು ಒಕ್ಕಲಿಗರನ್ನೆ. ಒಂದು ಜಿಲ್ಲೆಯಲ್ಲಿ ಒಕ್ಕಲಿಗರನ್ನೇ ಮೂರು ಪಕ್ಷಗಳು ಅಭ್ಯರ್ಥಿಗಳನ್ನಾಗಿ ಮಾಡುವುದು ಮಂಡ್ಯ ಜಿಲ್ಲೆಯ ವಿಶೇಷವಾಗಿದೆ. ಇದನ್ನೂ ಓದಿ: ಶಾಸಕ ಮಹೇಶ್ ಕುಮಠಳ್ಳಿಗೆ ಟಿಕೆಟ್ ಟೆನ್ಶನ್- ವಲಸಿಗ ಶಾಸಕರಿಗೆ ಮೂಲ ಬಿಜೆಪಿಗರಿಂದ ಕಿರಿಕ್
ರಾಜ್ಯದಲ್ಲಿ ಒಬ್ಬ ಒಕ್ಕಲಿಗ ಸಮುದಾಯದ ವ್ಯಕ್ತಿ ಸಿಎಂ ಆಗುತ್ತಾರೆ ಎಂದ್ರೆ ಮಂಡ್ಯ ಜಿಲ್ಲೆ ನಿರ್ಣಾಯಕ ಪಾತ್ರವಹಿಸುತ್ತದೆ. 1999ರಲ್ಲಿ ಎಸ್.ಎಂ.ಕೃಷ್ಣ (S M Krishna) ಅವರು ಕಾಂಗ್ರೆಸ್ನಿಂದ ಸಿಎಂ ಆದ ವೇಳೆ ಆಗ ಮಂಡ್ಯ ಜಿಲ್ಲೆಯಲ್ಲಿ 9 ಕ್ಷೇತ್ರಗಳು ಇದ್ದವು. 9 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈ ಮೂಲಕ ಒಕ್ಕಲಿಗ ಸಮೂದಾಯದ ನಾಯಕ ಎಸ್.ಎಂ.ಕೃಷ್ಣ ಅವರು ಸಿಎಂ ಆಗಲು ಅನುಕೂಲವಾಯಿತು. ಕಳೆದ 2018ರ ಚುನಾವಣೆಯ ವೇಳೆ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಸಿಎಂ ಆಗುತ್ತಾರೆ ಎಂದು ಹೇಳಲಾಗುತ್ತಿತ್ತು. ಹೀಗಾಗಿ ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ (JDS) ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜೆಡಿಎಸ್ ರಾಜ್ಯದಲ್ಲಿ 37 ಸೀಟ್ಗಳನ್ನು ತೆಗೆದುಕೊಳ್ಳಲು ಅನುಕೂಲ ಮಾಡಿತು. ಇದಲ್ಲದೇ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಲು ಸಹಾಯವಾಗಿತ್ತು.