ಮಡಿಕೇರಿ: ವಿಶ್ವ ಗುರು ಪ್ರಧಾನಿ ಮೋದಿಯನ್ನು ಗೌರವಿಸುತ್ತೇನೆ. ಆದರೆ ಚುನಾವಣೆಯ ಸಮಯದಲ್ಲಿ ಇಷ್ಟು ಬಾರಿ ಒಂದು ರಾಜ್ಯಕ್ಕೆ ಬರಬೇಕಾ..? ಒಂದು ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಪದೇ ಪದೇ ಬರುವುದು ಚುನಾವಣೆಯ ಮೇಲಿನ ಭಯದಿಂದಾನಾ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ (H Vishwanath) ಪ್ರಶ್ನಿಸಿದ್ದಾರೆ.
ಮಡಿಕೇರಿ (Madikeri) ಯಲ್ಲಿ ಮಾತಾನಾಡಿದ ಅವರು, ಚುನಾವಣೆಯ ಸಮಯದಲ್ಲಿ ಕರ್ನಾಟಕಕ್ಕೆ ಇಷ್ಟು ಬಾರಿ ಬರಬೇಕಾ..? ಈ ಹಿಂದೆ ಯಾವ ಪ್ರಧಾನಿಯೂ ಇಷ್ಟೊಂದು ಬಾರಿ ರಾಜ್ಯಕ್ಕೆ ಬಂದಿಲ್ಲ. ಪ್ರಧಾನ ಮಂತ್ರಿ ಬಂದರೆ ರಾಜಧಾನಿಯಲ್ಲಿ ಒಂದು ಭಾಷಣ ಮಾಡಿ ಹೋಗುತ್ತಾರೆ. ಆ ಭಾಷಣಗಳು ವಿಮರ್ಶೆಗಳು ಚರ್ಚೆಗಳು ಆಗುತ್ತಾ ಇತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಿರುಕುಳ ನೀಡುವ ಬಜರಂಗದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ: ಎಚ್ ವಿಶ್ವನಾಥ್
ನಿಮ್ಮ ಮೇಲೆ ಕರ್ನಾಟಕದ ಜನತೆಗೆ ನಂಬಿಕೆ ಹಾಳಾಗಿದೆಯೇ. ಭವಿಷ್ಯ ನಿಮ್ಮ ಭಾವನೆ ಆಗಿದೆ. ಕರ್ನಾಟಕದ ಜನ ಭಾರತೀಯ ಪ್ರಧಾನಮಂತ್ರಿ ಮೋದಿ (Narendra Modi) ಅವರು ಹಾಗೂ ಬಿಜೆಪಿ ಅವರ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ. ನಂಬಿಕೆಯನ್ನು ಮೂಡಿಸಲು ನಾನು ಪದೇ ಪದೇ ಬರುತ್ತಾ ಇದ್ದೀನಿ ಎಂದು ನೀವೇ ಜಗತ್ ಜಾಹೀರ್ ಮಾಡುತ್ತಾ ಇದ್ದೀರಿ ಅಲ್ವ ಯಾಕೆ ಎಂದು ಮರು ಪ್ರಶ್ನೆ ಮಾಡಿದ್ದಾರೆ.
ನಾನು ವಿಭಿನ್ನವಾಗಿ ಹೇಳುತ್ತಾ ಇಲ್ಲ. ಒಬ್ಬ ಪ್ರಧಾನಮಂತ್ರಿ ಈ ದೇಶದ ಪ್ರಧಾನಮಂತ್ರಿ ಬರಿ ಹಿಂದೂಗಳಿಗೆ ಅಲ್ಲ ಪ್ರಧಾನ ಮಂತ್ರಿ ಈ ದೇಶದ ಎಲ್ಲಾ ಜಾತಿ ಜನಾಂಗದ ಧರ್ಮ ಭಾಷಿಕರ ಪ್ರಧಾನಮಂತ್ರಿ ಅವರು. ಅದನ್ನ ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ಇಲ್ಲಿಗೆ ಬಂದು ಏನೇನೋ ಮಾತಾನಾಡುವುದು ಅಲ್ಲ. ಅದು ಗೌರವ ತರುವಂತಹದು ಅಲ್ಲ ಎಂದು ಕಿಡಿಕಾರಿದರು.