ಬೆಳಗಾವಿ: ತನ್ನ ಕ್ಷೇತ್ರಕ್ಕೆ ಪದೇ ಪದೆ ಹಸ್ತಕ್ಷೇಪ ಮಾಡುತ್ತಿದ್ದ ಗೋಕಾಕ್ (Gokak) ಸಾಹುಕಾರ್ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸೈಲೆಂಟ್ ಆಗಿ ಪಂಚ್ ಕೊಟ್ಟಿದ್ದಾರೆ.
ಬೆಳಗಾವಿಯ (Belagavi) ಗೋಕಾಕ್ ಲಿಂಗಾಯತರ ಹಿಡಿತ ಇರುವ ಮತಕ್ಷೇತ್ರ. ಅದರಲ್ಲೂ ಪಂಚಮಸಾಲಿ ಸಮುದಾಯದ ಮತದಾರರೇ ನಿರ್ಣಾಯಕವಾಗಿರುವ ಕ್ಷೇತ್ರ. ಈಗ ಅದೇ ಸಮುದಾಯದ ಅಭ್ಯರ್ಥಿಯನ್ನು ರಮೇಶ್ ಜಾರಕಿಹೊಳಿ (Ramesh Jarkiholi) ವಿರುದ್ಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಣಕ್ಕಿಳಿಸಿದ್ದಾರೆ. ತಾಲೂಕಿನ ಪ್ರಖ್ಯಾತ ವೈದ್ಯ ಡಾ.ಮಹಾಂತೇಶ ಕಡಾಡಿಗೆ ಅವರಿಗೆ ಕಾಂಗ್ರೆಸ್ (Congress) ಟಿಕೆಟ್ ಸಿಗುವಲ್ಲಿ ಹೆಬ್ಬಾಳ್ಕರ್ ಮಹತ್ವದ ಪಾತ್ರ ವಹಿಸಿದ್ದಾರೆ. ಇದನ್ನೂ ಓದಿ: ಸೆಕೆಂಡ್ ಲಿಸ್ಟ್ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಬಂಡಾಯ- ಬಿಜೆಪಿ, ಜೆಡಿಎಸ್ ಸೇರ್ಪಡೆ ಸಾಧ್ಯತೆ
ಟಿಕೆಟ್ ವಿಚಾರಕ್ಕಾಗಿ ದೆಹಲಿಯಲ್ಲಿ ಬೀಡು ಬಿಟ್ಟು ಹೈಕಮಾಂಡ್ ಎದುರು ಹಠ ಸಾಧಿಸಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ವಿರುದ್ಧದ ಮರಾಠಾ ಅಸ್ತ್ರ್ರಕ್ಕೆ ಪ್ರತಿಯಾಗಿ ಪಂಚಮಸಾಲಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಅಶೋಕ್ ಪೂಜಾರಿಯವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದರು. ಕ್ಷೇತ್ರದ ಪಂಚಮಸಾಲಿ ಮುಖಂಡರು ತಮ್ಮದೇ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಪಟ್ಟುಹಿಡಿದಿದ್ದರು.
ಲಕ್ಷ್ಮಿ ಹೆಬ್ಬಾಳ್ಕರ್ ಮಣಿಸಲು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಮರಾಠಾ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದ್ದಾರೆ. ಮರಾಠಾ ಸಮುದಾಯದ ತನ್ನ ಆಪ್ತ ನಾಗೇಶ್ ಮನ್ನೋಲ್ಕರ್ಗೆ ಬಿಜೆಪಿ (BJP) ಟಿಕೆಟ್ ಕೊಡಿಸಲು ರಮೇಶ್ ಜಾರಕಿಹೊಳಿ ಕಸರತ್ತು ನಡೆಸಿದ್ದಾರೆ. ತನ್ನ ಸೋಲಿಸಲು ತಂತ್ರ ಹೆಣೆದಿದ್ದ ರಮೇಶ್ ಅವರಿಗೆ, ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿತಂತ್ರ ಹೆಣೆದಿದ್ದಾರೆ.
ಗೋಕಾಕ್ ಕ್ಷೇತ್ರದ ಮತದಾರರ ಸಂಖ್ಯೆ 2,47,000 ಇದೆ. ಅದರಲ್ಲಿ ಲಿಂಗಾಯತ ಮತದಾರರು 90 ಸಾವಿರ ಇದ್ದಾರೆ. ಆ ಪೈಕಿ 75 ಸಾವಿರದಷ್ಟು ಪಂಚಮಸಾಲಿ ಸಮಾಜದ ಮತಗಳಿವೆ. ಇನ್ನೂ 50 ಸಾವಿರದಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಮತಗಳಿದ್ದು ಮುಸ್ಲಿಂ ಸಮುದಾಯ 30 ಸಾವಿರ, ಕುರಬ ಸಮುದಾಯ 25ಸಾವಿರ, ಉಪ್ಪಾರ ಸಮುದಾಯ 20 ಸಾವಿರ ಮತದಾರರಿದ್ದಾರೆ. ಮರಾಠಾ ಸಮುದಾಯದ 10 ಸಾವಿರ, ಇತರೇ ಸಮುದಾಯದ 25 ಸಾವಿರ ಮತದಾರರಿದ್ದಾರೆ. ಇದನ್ನೂ ಓದಿ: ರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ ಸಾವು