ತುಮಕೂರು: ಹೂವಿನಲ್ಲಿ ಕಲ್ಲು ಬಂದಿಲ್ಲ. ಯಾರೋ ದುಷ್ಕರ್ಮಿಗಳು ಎಸೆದಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (G Parameshwar) ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಂಜೆ ಭೈರೆನಹಳ್ಳಿ ಬಳಿ ಚುನಾವಣಾ (Election) ಪ್ರಚಾರಕ್ಕೆ ಬಂದಿದ್ದೆ. ಈ ವೇಳೆ ಸಾವಿರಾರು ಜನ ಕಾರ್ಯಕರ್ತರು ಇದ್ದರು. ನನ್ನನ್ನ ಮೇಲಿತ್ತಿಕೊಂಡರು. ಜೆಸಿಬಿಯಿಂದ ಮೇಲೆಯಿಂದ ಹೂ ಹಾಕುತ್ತಿದ್ದರು. ಈ ವೇಳೆ ನನ್ನ ತಲೆಯಲ್ಲಿ ರಕ್ತ ಬರೋಕೆ ಶುರುವಾಯಿತು. ತುಂಬಾ ರಕ್ತ ಬಂತು. ಅಲ್ಲೇ ನಮ್ಮ ಆಸ್ಪತ್ರೆ ವೈದ್ಯರು ನನ್ನ ಭೇಟಿ ಮಾಡೋಕೆ ಬಂದಿದ್ದರು. ಈ ವೇಳೆ ಅವರೇ ಕೂಡಲೇ ಚಿಕಿತ್ಸೆ ನೀಡಿದರು. ಬಳಿಕ ಅಕ್ಕಿರಾಂಪುರದ ಆರೋಗ್ಯ ಕೇಂದ್ರಕ್ಕೆ ಕರೆತಂದರು ಎಂದು ಹೇಳಿದರು.
ಹೂವಿನಲ್ಲಿ ಕಲ್ಲು ಬಂದಿಲ್ಲ. ಯಾರೋ ದುಷ್ಕರ್ಮಿಗಳು ಎಸೆದಿದ್ದಾರೆ. ನಾನು 35 ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನಗೆ ವಿರೋಧಿಗಳು ಬಹಳ ಕಡಿಮೆ. ದ್ವೇಷ ಇದ್ರೆ ಈ ರೀತಿಯಲ್ಲಿ ಮಾಡಬಾರದು. ಸಾರ್ವಜನಿಕ ವಲಯದಲ್ಲಿ ನಾವು ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಪೊಲೀಸರು ತನಿಖೆ ಮಾಡಬೇಕು. ನಾವು ಊಹೆ ಮಾಡಿ ಅವರ ಮೇಲೆ ಇವರ ಮೇಲೆ ಹೇಳುವುದಕ್ಕೆ ಬರಲ್ಲ. ಎಲ್ಲರ ವಿಷಯದಲ್ಲೂ ಪ್ರತಿಕ್ರಿಯೆ ಇದ್ದೆ ಇರುತ್ತೆ. ಯಾರು ಸಹ ಉದ್ವೇಗಕ್ಕೆ ಒಳಗಾಗಬಾರದು. ನನಗೆ ಭದ್ರತೆಯ ಅವಶ್ಯಕತೆ ಬೇಕು ಅಂತ ಅಂದುಕೊಂಡಿರಲಿಲ್ಲ. ಖಂಡಿತ ನನಗೆ ಯಾವುದೇ ಭಯವಿಲ್ಲ. ನನಗೆ ಯಾವುದೇ ತೊಂದರೆಯಾದರೂ ಎದುರಿಸುತ್ತೇನೆ ಎಂದರು.
ಇನ್ನೊಂದು ದಿನ ರೆಸ್ಟ್ ಮಾಡೋಕೆ ಹೇಳಿದ್ದಾರೆ. ರೆಸ್ಟ್ ಮಾಡಿ ಚುನಾವಣಾ ಪ್ರಚಾರಕ್ಕೆ ತೆರಳುತ್ತೇನೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ನಮ್ಮೆಲ್ಲ ಸ್ನೇಹಿತರು ಕರೆ ಮಾಡಿ ಆರೋಗ್ಯ ವಿಚಾರಿಸಿದರು ಎಂದು ತಿಳಿಸಿದರು. ಇದನ್ನೂ ಓದಿ: ಕಾರಿನಿಂದ ಕುಸಿದಿದ್ದಕ್ಕೆ ಸಿದ್ದರಾಮಯ್ಯರನ್ನು ಟೀಕಿಸುವುದು ಸರಿಯಲ್ಲ – ಬಿಎಸ್ವೈ
ಜಿ.ಪರಮೇಶ್ವರ ನಾಟಕ ಮಾಡುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ನಾಟಕ ಮಾಡಿರಬಹುದು. ಅದಕ್ಕೆ ಅವರಿಗೆ ಹಾಗೆ ಅನಿಸುತ್ತದೆ. ನನ್ನ ನೋವು ನನಗೆ ಮಾತ್ರ ಗೊತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: ಬಾಗಲಕೋಟೆಯಲ್ಲಿ ದಾಖಲೆಯಿಲ್ಲದ 5 ಕೋಟಿ ರೂ. ಹಣ ಜಪ್ತಿ