ಬೀದರ್: ಕರುನಾಡಿಗೆ ಮತ್ತೊಮ್ಮೆ ಚುನಾವಣಾ ಚಾಣಕ್ಯನ ಎಂಟ್ರಿಯಾಗಿದೆ. ಲಿಂಗಾಯತರ ಕಾಶಿ ಬೀದರ್ (Bidar) ಜಿಲ್ಲೆಯಲ್ಲಿ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡುವ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಲಿಂಗಾಯತರ ಓಲೈಕೆಗೆ ಇಳಿದಿದ್ದಾರೆ.
ಬೆಳಗ್ಗೆ 10 ಗಂಟೆಗೆ ಬೀದರ್ನ ಗುರುದ್ವಾರಕ್ಕೆ ಹಾಗೂ 11ಕ್ಕೆ ಐತಿಹಾಸಿಕ ನರಸಿಂಹ ಝರ್ನಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ 12:20ಕ್ಕೆ ರಸ್ತೆ ಮೂಲಕ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ. ನಂತರ ಬಸವಣ್ಣ (Basavanna) ಆಶೀರ್ವಾದ ಪಡೆದು ಅನುಭವ ಮಂಟಪದಲ್ಲೇ ಹಲವು ಸ್ವಾಮೀಜಿಗಳ ಜೊತೆ ಶಾ (AmitShah) ಸಂವಾದ ಮಾಡಲಿದ್ದಾರೆ. ಅದಾದ ಬಳಿಕ 12:30ಕ್ಕೆ ಅನುಭವ ಮಂಟಪದಲ್ಲಿ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಿ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಸವಕಲ್ಯಾಣ ಪಟ್ಟಣದ ಸಂಪೂರ್ಣವಾಗಿ ಕೇಸರಿ ಮಯವಾಗಿದೆ. ಇದನ್ನೂ ಓದಿ: 40 ಲಕ್ಷ ಲಂಚ ಅಲ್ಲ ಸಿಕ್ಕಿದ್ದು 1.62 ಕೋಟಿ – ಬಿಜೆಪಿ ಶಾಸಕನ ಪುತ್ರನ ಜೊತೆ ಐವರು ಅರೆಸ್ಟ್
ಇನ್ನು ಅಮಿತ್ ಶಾ ಬೀದರ್ ಬಳಿಕ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ರಣಕಹಳೆ ಮೊಳಗಿಸಲಿದ್ದಾರೆ. ದೇವನಹಳ್ಳಿಯಲ್ಲಿ ಏರ್ಪಡಿಸಲಾಗಿರುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಟಾರ್ಗೆಟ್ ಬೆಂಗಳೂರು ಗ್ರಾಮಾಂತರಗೆ ಮುನ್ನುಡಿ ಬರೆಯಲಿದ್ದಾರೆ. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಗೆ ಬರುವ 4 ಕ್ಷೇತ್ರಗಳಲ್ಲಿ ಬಿಜೆಪಿ ಬೇರೂರಿಸಲು ತಂತ್ರಗಾರಿಕೆ ರೂಪಿಸಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ ಕಮಲ ಅರಳಿಸೋಕೆ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡೋದು, 4 ಕ್ಷೇತ್ರದಲ್ಲಿ ಕನಿಷ್ಠ 2 ಕ್ಷೇತ್ರ ಗೆಲ್ಲೋಕೆ ಪ್ಲ್ಯಾನ್ ಮಾಡೋದು. ಮನೆ ಮನೆಗೂ ಅಭಿವೃದ್ಧಿ ಕೆಲಸ ತಲುಪಿಸೋದು. ಹಿಂದುತ್ವ, ರಾಷ್ಟ್ರೀಯತೆ, ಅಭಿವೃದ್ಧಿ ಕಾರ್ಯ, ಡಬಲ್ ಎಂಜಿನ್ ಸರ್ಕಾರದ ಹೆಸರಿನಲ್ಲಿ ಪಕ್ಷ ಸಂಘಟನೆ ಹಾಗೂ ಮೋದಿ ವರ್ಚಸ್ಸು ಬಳಸಿಕೊಂಡು ಮತದಾರರ ಸೆಳೆಯುವ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದೆ.