ಕಾಂಗ್ರೆಸ್‌ ಭದ್ರಕೋಟೆ ಸಂಡೂರಿಗೆ ಬರುತ್ತಿದ್ದಾರೆ ಅಮಿತ್‌ ಶಾ : ಬಿಜೆಪಿ ಪ್ಲ್ಯಾನ್‌ ಏನು?

Public TV
3 Min Read
Amit Shah 4

ಬಳ್ಳಾರಿ: ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ಇಂದು ಗಣಿನಾಡು ಬಳ್ಳಾರಿಗೆ (Ballari) ಆಗಮಿಸಲಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರಿನ (Sandur) ಎಸ್‌ಆರ್‌ಎಸ್‌ ಶಾಲಾ ಮೈದಾನದಲ್ಲಿ ಬಿಜೆಪಿಯ (BJP) ಬೃಹತ್ ಸಾರ್ವಜನಿಕ ಸಭೆ ಆಯೋಜನೆಗೊಂಡಿದ್ದು, ಕಾರ್ಯಕ್ರಮದ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದೆ.

ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇತಿಹಾಸದಲ್ಲಿ ಈವರೆಗೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಈ ಬಾರಿ ಶತಾಯಗತಾಯ ಗೆಲುವು ಸಾಧಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ.

ಬಳ್ಳಾರಿ ಜಿಲ್ಲೆಯಿಂದ ಸ್ಪರ್ಧೆ ಮಾಡುವ ಇಂಗಿತ ಹೊಂದಿರುವ ರಾಮುಲು (Sriramulu) ಅವರ ಹೆಸರನ್ನು ಅಮಿತ್ ಶಾ ಇಂದು ಘೋಷಣೆ ಮಾಡುವ ಸಾಧ್ಯತೆಯಿದೆ. ಈ ಕಾರ್ಯಕ್ರಮದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಳಗೊಂಡಂತೆ ಕಲ್ಯಾಣ ಕರ್ನಾಟಕದ ಲಕ್ಷಾಂತರ ಜನ ಭಾಗವಹಿಸುವ ಸಾಧ್ಯತೆಯಿದೆ. ಇದಕ್ಕಾಗಿ ಎಸ್‍ಆರ್‍ಎಸ್ ಗ್ರೌಂಡ್‍ನಲ್ಲಿ ಬೃಹತ್ ವೇದಿಕೆ ಹಾಕಲಾಗಿದೆ.

Amit Shah In Belgavi

ಹುಬ್ಬಳ್ಳಿಯಿಂದ ಹೆಲಿಕಾಪ್ಟರ್‌ ಮೂಲಕ ಮಧ್ಯಾಹ್ನ 1:30ರ ವೇಳೆಗೆ ಸಂಡೂರಿಗೆ ಬರುವ ಅಮಿತ್ ಶಾ ಮೊದಲು ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವೇದಿಕೆ ಕಾರ್ಯಕ್ರಮ ಮುಗಿಸಿ ಬಳ್ಳಾರಿ ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಕೋರ್ ಕಮಿಟಿಯ ನಾಯಕರ ಜೊತೆ ಮಧ್ಯಾಹ್ನ 2:30ಕ್ಕೆ ಶಿವಪುರ ಪ್ಯಾಲೇಸ್‍ನಲ್ಲಿ ಸಭೆ ನಡೆಸಲಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರ ಸಭೆಯ ನಂತರ ಅಮಿತ್ ಶಾ ಸಂಜೆ 4 ಗಂಟೆಗೆ ಬೆಂಗಳೂರಿಗೆ ತೆರಳಲಿದ್ದು, ವಿಧಾನಸಭಾ ಚುನಾವಣೆಯ ಸಿದ್ಧತೆಯ ಬಗ್ಗೆ ರಾಜ್ಯದ ಬಿಜೆಪಿ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಪಕ್ಷ ಸಂಘಟನೆ ಹಾಗೂ ಚುನಾವಣಾ ಗೆಲುವಿಗೆ ಬೇಕಾದ ತಂತ್ರಗಳ ಬಗ್ಗೆ ಬಿಜೆಪಿ ನಾಯಕರಿಗೆ ಸಲಹೆ ನೀಡಲಿದ್ದಾರೆ. ಗಣಿನಾಡು ಬಳ್ಳಾರಿ ಹಾಗೂ ನಾಲ್ಕು ಜಿಲ್ಲೆಯ ಬೆಜೆಪಿ ನಾಯಕರಿಗೆ ಕಲ್ಯಾಣ ಕರ್ಣಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಹೇಗೆ ಎನ್ನುವ ಪಾಠ ಅಮಿತ್ ಶಾ ಮಾಡಲಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಸ್ನೇಹಿತರ ಸವಾಲ್- ರಾಮುಲು ವರ್ಸಸ್ ಜನಾರ್ದನ ರೆಡ್ಡಿ!

Amit Shah 05

ಕಲ್ಯಾಣ ಕರ್ನಾಟಕದ ಮೇಲೆ ಬಿಜೆಪಿ ಕಣ್ಣು:
ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ಏಳು ಜಿಲ್ಲೆಗಳಲ್ಲಿ 41 ಕ್ಷೇತ್ರಗಳಿದ್ದು, ಅದರಲ್ಲಿ ಬಿಜೆಪಿ 19, ಕಾಂಗ್ರೆಸ್ 18, ಜೆಡಿಎಸ್ 4 ಕ್ಷೇತ್ರವನ್ನು ಪಡೆದುಕೊಂಡಿದೆ. ಈ ಬಾರಿ ಚುನಾವಣೆಯಲ್ಲಿ ಮತ್ತಷ್ಟು ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಬಿಜೆಪಿ ಹೈಕಮಾಂಡ್ ಗಮನ ಹರಿಸಿದೆ.

ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಭಾಗದ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 22 ಕ್ಷೇತ್ರಗಳ ಪೈಕಿ 10 ಕ್ಷೇತ್ರದಲ್ಲಿ ಬಿಜೆಪಿ, 10 ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಎರಡು ಕ್ಷೇತ್ರದಲ್ಲಿ ಜೆಡಿಎಸ್ ಅಧಿಕಾರದಲ್ಲಿದೆ. 2008ರಲ್ಲಿ ಬಿಜೆಪಿ ಸರ್ಕಾರ ರಚನೆಗೆ ಹೆಚ್ಚಿನ ಪಾತ್ರವಹಿಸಿದ್ದ ಬಳ್ಳಾರಿ ಹಾಗೂ ವಿಜಯನಗರ ಭಾಗದ ಕ್ಷೇತ್ರಗಳಲ್ಲಿ ಚುನಾವಣೆ ರಣತಂತ್ರ ಹೆಣೆಯಲಾಗುತ್ತಿದೆ. ಪರಿಶಿಷ್ಟ ಪಂಗಡದ ಪ್ರಮುಖ ನಾಯಕ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕಳೆದ ಬಾರಿ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಬಾರಿ ತವರು ಜಿಲ್ಲೆಯ ಸಂಡೂರು ಇಲ್ಲವೇ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಇಂಗಿತ ವ್ಯಕ್ತಪಡಿಸಿದ್ದಾರೆ.

AMITSHAH 1

ಕಾಂಗ್ರೆಸ್‌ ಭದ್ರಕೋಟೆ:
ಸಂಡೂರು ಕಾಂಗ್ರೆಸ್‍ನ ಭದ್ರಕೋಟೆ 1957ರ ಸಾರ್ವತ್ರಿಕ ಚುನಾವಣೆಯಿಂದ 2018ರ ಚುನಾವಣೆವರೆಗೆ ಸಂಡೂರು ವಿಧಾನಸಭಾ ಕ್ಷೇತ್ರ ಸಂಪೂರ್ಣ ಕಾಂಗ್ರೆಸ್‍ನ ಭದ್ರಕೋಟೆ ಆಗಿದೆ. 1957ರಲ್ಲಿ ಎಚ್.ರಾಯನಗೌಡ ಕ್ಷೇತ್ರದಿಂದ ಮೊದಲ ಶಾಸಕರಾಗಿ ಕಾಂಗ್ರೆಸ್‍ನಿಂದ ಆಯ್ಕೆ ಗೊಂಡಿದ್ದರೆ, ನಂತರದಲ್ಲಿ 1962, 1967, 1972, 1989, 1994, 1999ರಲ್ಲಿ ಕಾಂಗ್ರೆಸ್‍ನಿಂದ ಎಂ.ವೈ.ಘೋರ್ಪಡೆ ಗೆದ್ದಿದ್ದರು. 1985ರಲ್ಲಿ ಯು. ಭೂಪತಿ ಅವರು ಜನತಾ ಪಕ್ಷದಿಂದ ಹಾಗೂ 2004ರಲ್ಲಿ ಸಂತೋಷ್ ಲಾಡ್ ಜೆಡಿಎಸ್‍ನಿಂದ ಆಯ್ಕೆಗೊಂಡಿದ್ದು ಬಿಟ್ಟರೆ ಎಲ್ಲ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. 2008, 2013 ಹಾಗೂ 2018ರಲ್ಲಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ಈ.ತುಕಾರಾಮ್ ಈ ಬಾರಿಯೂ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಸತತ ಮೂರು ಬಾರಿ ಆಯ್ಕೆಗೊಂಡಿರುವ ಹಿನ್ನೆಲೆ ಕ್ಷೇತ್ರದಲ್ಲಿ ವಿರೋಧಿ ಅಲೆ ಇದ್ದು, ಶ್ರೀರಾಮುಲು ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರೋಚಕ ಹಣಾಹಣಿ ಬೀಳಲಿದೆ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *