– ಶೆಟ್ಟರ್ಗೆ ಟಿಕೆಟ್ ನಿರಾಕರಣೆಗೆ ಕಾರಣ ಹೇಳಿದ್ದೇವೆ ಆದ್ರೆ ನಾವು ಬಹಿರಂಗಪಡಿಸಲ್ಲ
– ಅಸಲಿ ಆಟ ಈಗ ಶುರ ಎಂದ ಚುನಾವಣಾ ಚಾಣಕ್ಯ
ಹುಬ್ಬಳ್ಳಿ: ಟಿಕೆಟ್ ಕೊಟ್ಟಿಲ್ಲ ಎಂದು ಕಾಂಗ್ರೆಸ್ (Congress) ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar), ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ರೋಡ್ ಶೋ ವೇಳೆ ಮಾತನಾಡಿದ ಅವರು, ಶೆಟ್ಟರ್ ಹೋಗಿದ್ರಿಂದ ಪಕ್ಷಕ್ಕೇನು ನಷ್ಟವಿಲ್ಲ. ಸ್ವತಃ ಶೆಟ್ಟರ್ ಸೋಲ್ತಾರೆ. ಬಿಜೆಪಿ (BJP) ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯವಾಗಿದೆ. ಶೆಟ್ಟರ್ ಒಬ್ಬರನ್ನು ಮಾತ್ರವಲ್ಲ, ಅನೇಕರನ್ನು ಕೈಬಿಡಲಾಗಿದೆ. ಲಿಂಗಾಯತ ಸಮುದಾಯ ಬಿಜೆಪಿ (BJP) ಜೊತೆಗೆ ಇದೆ ಎಂದು ಹೇಳಿದರು.
ಶೆಟ್ಟರ್ ಒಬ್ಬರಿಗೆ ಟಿಕೆಟ್ ತಪ್ಪಿಸಿಲ್ಲ. ಹಲವಾರು ಹಿರಿಯರಿಗೆ ಟಿಕೆಟ್ ಕೊಟ್ಟಿಲ್ಲ. ಕಾರಣವನ್ನು ಶೆಟ್ಟರ್ಗೆ ಹೇಳಿದ್ದೇವೆ. ನಾವು ಅದನ್ನು ಬಹಿರಂಗಪಡಿಸಲ್ಲ. ಮತದಾರರಿಗೆ ಯಾವ ರೀತಿ ಹೇಳಬೇಕೋ ಆ ರೀತಿ ಮುಟ್ಟಿಸುತ್ತೇವೆ. ಸವದಿ, ಶೆಟ್ಟರ್ಗೆ ಪಕ್ಷದಲ್ಲಿ ಎಲ್ಲಾ ಗೌರವ ಸ್ಥಾನಮಾನ ನೀಡಿದ್ದೆವು. ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ ಎಂದರು.
ಒಂದು ಜಾಗದಲ್ಲಿಯೂ ಲಿಂಗಾಯಿತರನ್ನು ತೆಗೆದು ಬೇರೆಯವರಿಗೆ ಕೊಟ್ಟಿಲ್ಲ. ಕಾಂಗ್ರೆಸ್ನವರು ಲಿಂಗಾಯಿತರಿಗೆ ಪದೇ ಪದೇ ಅಪಮಾನ ಮಾಡಿದೆ ಎಂದು ಆರೋಪಿಸುತ್ತಿದೆ. ಆದರೆ ಲಿಂಗಾಯತರ ಬಗ್ಗೆ ಮಾತನಾಡುವ ಅಧಿಕಾರ ಕಾಂಗ್ರೆಸ್ಗೆ ನೈತಿಕತೆಯಿಲ್ಲ. ಬಿಜೆಪಿ ಯಾವುದೇ ಕಪಿಮುಷ್ಟಿಯಲ್ಲಿಲ್ಲ. ಟೀಮ್ ವರ್ಕ್ ಮೇಲೆ ಅಧಿಕಾರಕ್ಕೆ ಬರುತ್ತದೆ. ನಾಳೆಯಿಂದ ನಿಜವಾದ ಚುನಾವಣೆ ಆಟ ಆರಂಭವಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಸ್ಟ್ಯಾಟಜಿ ಬದಲಾಗುತ್ತೆ. ವಿಧಾನಸಭೆಗೂ, ಲೋಕಸಭೆಗೆ ವ್ಯತ್ಯಾಸವಿದೆ ಎಂದು ಎಚ್ಚರಿಸಿದ್ದಾರೆ.
40 ಪರ್ಸೆಂಟ್ ಸರ್ಕಾರ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ಎಲ್ಲಿಯೂ ಕೇಸ್ ನಡೆದಿಲ್ಲ. ಯಾವುದೇ ಕೋರ್ಟ್ನಲ್ಲಿಯೂ ಕೇಸ್ ಇಲ್ಲ. ಬಿಜೆಪಿ ಎಂದೆಂದಿಗೂ ಭ್ರಷ್ಟಾಚಾರದ ವಿರುದ್ಧವಿದೆ ಎಂದರು.
ಜೆಡಿಎಸ್ ಪರಿವಾರ ರಾಜಕೀಯ ಮಾಡುತ್ತದೆ. ದೇವೇಗೌಡ ಬಳಿಕ ಇದಿಗ ಅವರ ಮಗ ಕುಮಾರಸ್ವಾಮಿ ಇದ್ದಾರೆ. ನಮ್ಮ ಪಕ್ಷದಲ್ಲಿ ಅಧ್ಯಕ್ಷರು, ಸಿಎಂಗಳು ವರಿಷ್ಠರು ಬದಲಾಗುತ್ತಲೆ ಇರುತ್ತಾರೆ. ಆದರೆ ಜೆಡಿಎಸ್ನಲ್ಲಿ ದೇವೇಗೌಡ ಕುಟುಂಬದ ಪ್ರತಿಯೊಬ್ಬರು ಚುನಾವಣೆ ಸ್ಪರ್ಧಿಸುತ್ತಾರೆ. ನಮ್ಮಲ್ಲಿ ಯಾವುದೇ ಕುಟುಂಬಕ್ಕೆ ಪಕ್ಷದ ಅಧಿಕಾರ ನೀಡಿಲ್ಲ ಎಂದರು. ಇದನ್ನೂ ಓದಿ: ಕಣದಲ್ಲಿರುವ ಬಂಡಾಯ ವೀರರು ಯಾರು? ಹಿಂದೆ ಸರಿದವರು ಯಾರು?