ಬೆಳಗಾವಿ: ಸ್ವಾತಂತ್ರ್ಯ ಸೇನಾನಿ ವೀರ್ ಸಾವರ್ಕರ್ ಅವರನ್ನು ಕಾಂಗ್ರೆಸ್ (Congress) ಪದೇಪದೇ ಅಪಮಾನ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕಿಡಿಕಾರಿದ್ದಾರೆ.
ಸವದತ್ತಿಯಲ್ಲಿ (Savadatti) ಚುನಾವಣಾ (Election) ಪ್ರಚಾರದ ವೇಳೆ ಮಾತನಾಡಿದ ಅವರು, ಎರಡು ಬಾರಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಆಗಿದ್ದರು. ಅಲ್ಲದೆ ಕಾಂಗ್ರೆಸ್ ಸಾವರ್ಕರ್ ಅವರನ್ನು ಹಿಂಡಲಗ (Hindalga) ಜೈಲಿಗೆ ಹಾಕಿಸಿತ್ತು. ಈಗಲೂ ಕಾಂಗ್ರೆಸ್ ಅವರನ್ನು ಅಪಮಾನಿಸುವುದನ್ನು ನಿಲ್ಲಿಸಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಖರ್ಗೆ ಹತ್ಯೆಗೆ ಸಂಚು ಆಡಿಯೋ ಬಾಂಬ್ – ಸಿಎಂ ಬೊಮ್ಮಾಯಿ ಹೇಳಿದ್ದೇನು?
ರಾಹುಲ್ ಗಾಂಧಿಯವರು (Rahul Gandhi) ಸಾವರ್ಕರ್ ಅವರಿಗೆ ಅಪಮಾನ ಮಾಡುತ್ತಾರೆ. ಅವರು 10 ಜನ್ಮ ಹುಟ್ಟಿದರೂ ಸಾವರ್ಕರ್ರಂತಹ ಬಲಿದಾನ ನೋಡಲು ಸಾಧ್ಯವಿಲ್ಲ. ಅವರ ತ್ಯಾಗದ ಪ್ರತೀಕವಾಗಿ ಸುವರ್ಣ ಸೌಧದಲ್ಲಿ ವೀರ್ ಸಾವರ್ಕರ್ ಭಾವಚಿತ್ರ ಹಾಕಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ನಿರಂತರವಾಗಿ ರೈತರಿಗೆ ಅನ್ಯಾಯ ಮಾಡಿದೆ. ವಿಶೇಷವಾಗಿ ಉತ್ತರ ಕರ್ನಾಟಕ ರೈತರಿಗೆ ಅನ್ಯಾಯ ಮಾಡಿದೆ. ಹಿಂದೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಕಾಂಗ್ರೆಸ್ ಸರ್ಕಾರ ಮಹದಾಯಿ (Mahadayi) ವಿವಾದ ಬಗೆಹರಿಸಲಿಲ್ಲ. 2007ರಲ್ಲಿ ಸೋನಿಯಾ ಗಾಂಧಿ ಮಹದಾಯಿ ನದಿ ನೀರು ಕರ್ನಾಟಕಕ್ಕೆ ಕೊಡುವುದಿಲ್ಲ ಎಂದಿದ್ದರು. ಈಗ ಅವರ ಸರ್ಕಾರ ಹೋಗಿದೆ. ಪ್ರಧಾನಿ ಮೋದಿ ಆಗಮಿಸಿ ಕರ್ನಾಟಕಕ್ಕೆ ಮಹದಾಯಿ ನೀರು ಹರಿಸುವ ನಿರ್ಧಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯ ಈ ನೆಲ ಬಸವಣ್ಣರವರ ಕ್ಷೇತ್ರ, ಜಗತ್ತಿಗೆ ಪ್ರಜಾಪ್ರಭುತ್ವ ಪಾಠ ಮಾಡಿದ ಬಸವಣ್ಣರಿಗೆ ನಮಿಸುತ್ತೇನೆ. ಅಲ್ಲದೆ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರನ್ನು ಸ್ಮರಿಸುತ್ತೇನೆ. ಬೆಂಗಳೂರಿನಿಂದ ತಡವಾಗಿ ಹೊರಟೆ ಹೀಗಾಗಿ ಸವದತ್ತಿಗೆ ಆಗಮಿಸಲು ವಿಳಂಬವಾಗಿದೆ. ಕ್ಷಮೆ ಇರಲಿ ಎಂದು ಜನರಲ್ಲಿ ಕೇಳಿಕೊಂಡರು. ಈ ಬಾರಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕ್ರಿಕೆಟಿಗ ನಿತೀಶ್ ರಾಣಾ ಪತ್ನಿಗೆ ಕಿರುಕುಳ – ಓರ್ವ ಅರೆಸ್ಟ್