ಬೆಂಗಳೂರು: ಟಿಕೆಟ್ ಹಂಚಿಕೆಯಾದ ಬಳಿಕ ಎದ್ದ ಬಂಡಾಯ ಇನ್ನೂ ಶಮನವಾಗದ್ದಕ್ಕೆ ಗೃಹ ಸಚಿವ ಅಮಿತ್ ಶಾ (Amit Shah) ರಾಜ್ಯ ನಾಯಕರ ವಿರುದ್ಧ ಗರಂ ಆಗಿದ್ದಾರೆ.
ಶುಕ್ರವಾರ ರಾತ್ರಿ ನಗರದ ತಾಜ್ ವೆಸ್ಟ್ಎಂಡ್ ಹೋಟೆಲ್ನಲ್ಲಿ ರಾಜ್ಯ ಬಿಜೆಪಿ (BJP) ನಾಯಕರ ಜೊತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಜ್ಯ ನಾಯಕರು ಬಂಡಾಯ ಶಮನದ ಸಕ್ಸಸ್ ರೇಟಿಂಗ್ ಒಪ್ಪಿಸಿದ್ದಾರೆ.
ಹಲವೆಡೆ ಇನ್ನೂ ಬಂಡಾಯ ಶಮನವಾಗದ್ದಕ್ಕೆ ಅಮಿತ್ ಶಾ ಗರಂ ಆಗಿದ್ದು, ರಾಜ್ಯ ನಾಯಕರ ಬಂಡಾಯ ಶಮನ ಕಸರತ್ತಿಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಏಪ್ರಿಲ್ 23ರವರೆಗೆ ಪ್ರಚಾರ ಕಣದಲ್ಲಿ ಅಮಿತ್ ಶಾ ಇರಲಿದ್ದು, ಇಂದು ದಾವಣಗೆರೆಗೆ ಭೇಟಿ ನೀಡಿ ರ್ಯಾಲಿ ರೋಡ್ ಶೋ ಬಳಿಕ ಮಠಾಧೀಶರನ್ನು ಭೇಟಿ ಮಾಡಲಿದ್ದಾರೆ.
ಬಂಡಾಯ ಶಮನಕ್ಕೆ ಶಾ ಮದ್ದು
ಬಂಡಾಯ ಶಮನಕ್ಕೆ ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶಗಳ ಪರಿಸ್ಥಿತಿಯನ್ನು ವಿವರಿಸಿ ರಾಜ್ಯಗಳ ಬಿಜೆಪಿ ನಾಯಕರೇ ಸ್ಥಳೀಯವಾಗಿ ಹೇಗೆ ಬಂಡಾಯದ ಕಿಚ್ಚು ಆರಿಸಿದ ಬಗ್ಗೆ ವಿವರಣೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗಾಗಿ ಒದೆ ತಿಂದಿದ್ದೇನೆ, ನನ್ನ ಪ್ಯಾಂಟ್ ಹರಿದು ಹಾಕಿದ್ರು – ವಿ.ಸೋಮಣ್ಣ
ಈ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ (Karnataka) ತುಂಬಾ ಭಿನ್ನವಾಗಿದ್ದು ಇಲ್ಲಿ ಹಲವು ಕ್ಷೇತ್ರಗಳಲ್ಲಿ ವೈಯಕ್ತಿಕ ಮತ್ತು ಕುಟುಂಬ ವರ್ಚಸ್ಸು ಹೆಚ್ಚಾಗಿದೆ. ಜೊತೆಗೆ ಇನ್ನೂ ಅನೇಕ ಸ್ಥಳೀಯ ವಿಚಾರಗಳಿಂದ ಬಂಡಾಯ ಹೆಚ್ಚಿದೆ. ಈ ಬಂಡಾಯವನ್ನು ರಾಜ್ಯದ ನಾಯಕರೇ ಸ್ಥಳೀಯವಾಗಿ ನಿಭಾಯಿಸಬೇಕು. ಬಂಡಾಯ ಶಮನಕ್ಕೆ ಹೈಕಮಾಂಡ್ ಮುಂದಾದರೆ ಮತ್ತಷ್ಟು ಹೊಸ ಸಮಸ್ಯೆಗಳು ಸೃಷ್ಟಿ ಆಗಬಹುದು. ನೀವೇ ಹೊಣೆ ಹೊತ್ತು ಬಂಡಾಯ ಶಮನ ಮಾಡಿ ಎಂದು ಅಮಿತ್ ಶಾ ಯಡಿಯೂರಪ್ಪ, ಬೊಮ್ಮಾಯಿಗೆ ಬಿಗ್ ಟಾಸ್ಕ್ ನೀಡಿದ್ದಾರೆ.