ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿರುವ ಹಿಜಬ್, ಕೇಸರಿ ಶಾಲು ಸಂಘರ್ಷಕ್ಕೆ ಕಾನೂನಾತ್ಮಕವಾಗಿ ಅಂತ್ಯ ಹಾಡಲು ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದೆ. ಈ ನಿಟ್ಟಿನಲ್ಲಿ ಸಿದ್ದತೆ ಪ್ರಾರಂಭ ಮಾಡಿರುವ ಶಿಕ್ಷಣ ಇಲಾಖೆಯು ಕಾನೂನು ಇಲಾಖೆ ಜೊತೆ ಚರ್ಚೆ ಮಾಡಿದೆ.
1ರಿಂದ 10ನೇ ತರಗತಿಗಳಿಗೆ ಇರುವಂತೆ ಡ್ರೆಸ್ ಕೋಡ್ ನಿಯಮ ಕಾಲೇಜುಗಳಲ್ಲಿ ಜಾರಿ ಮಾಡಲು ಶಿಕ್ಷಣ ಇಲಾಖೆ ಸಿದ್ದತೆ ಮಾಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಡ್ರೆಸ್ ಕೋಡ್ ಜಾರಿಗೆ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದ್ದು, ಹೈಕೋರ್ಟ್ ತೀರ್ಪು ನೋಡಿಕೊಂಡು ಮುಂದಿನ ತೀರ್ಮಾನ ಮಾಡಲು ನಿರ್ಧರಿಸಿದೆ. ಇದನ್ನೂ ಓದಿ: ಶಾಲಾ-ಕಾಲೇಜುಗಳಲ್ಲಿ ಹಿಜಬ್, ಕೇಸರಿ ಶಾಲು ಧರಿಸಬಾರದು: ಸತೀಶ್ ಜಾರಕಿಹೊಳಿ
ಸಮವಸ್ತ್ರ ನಿಯಮ ಜಾರಿಗೆ ಸರ್ಕಾರಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು 1995, 2017, 2018 ಕಾಯ್ದೆಯಲ್ಲಿ ಸರ್ಕಾರಕ್ಕೆ ಸಮವಸ್ತ್ರ ನಿಯಮ ಜಾರಿಗೆ ಸಂಪೂರ್ಣ ಅಧಿಕಾರ ಇದೆ. ಈ ಕಾಯ್ದೆ ಅನ್ವಯವೇ ಕಾನೂನಾತ್ಮವಾಗಿಯೇ ಕಾಲೇಜುಗಳಿಗೆ ಸಮವಸ್ತ್ರ ನೀತಿ ಜಾರಿಗೆ ಸಿದ್ದತೆ ಮಾಡಿದೆ.
ಸಮವಸ್ತ್ರ ನಿಯಮ ಹೇಗಿರಲಿದೆ?
1ರಿಂದ 10 ನೇ ತರಗತಿಗಳಿಗೆ ಇರುವಂತೆ ಪದವಿ ಪೂರ್ವ ಕಾಲೇಜುಗಳಿಗೂ ಏಕರೂಪದ ಡ್ರೆಸ್ ಕೋಡ್ ನಿಯಮ ಜಾರಿ ಮಾಡಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಡ್ರೆಸ್ ಕೋಡ್ (ಸಮವಸ್ತ್ರ) ನಿಯಮ ಜಾರಿಗೆ ಬರಲಿದೆ. ಧಾರ್ಮಿಕ ಭಾವನೆಗಳಿಗೆ ಪ್ರೋತ್ಸಾಹ ನೀಡುವುದಾಗಲಿ ಅಥವಾ ಧಕ್ಕೆ ಉಂಟು ಮಾಡದಂತೆ ಏಕರೂಪದ ಸಮವಸ್ತ್ರ ನಿಯಮ ಜಾರಿ ಮಾಡಲಾಗುತ್ತದೆ. ಯಾವ ಮಾದರಿಯ (ಡಿಸೈನ್) ಡ್ರೆಸ್ ಧರಿಸಬೇಕು. ಯಾವ ಬಣ್ಣದ (ಕಲರ್) ಡ್ರೆಸ್ ಧರಿಸಬೇಕು ಎನ್ನುವುದು SDMCಗಳ ವಿವೇಚನೆಗೆ ಬಿಡಲು ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: ಮುಸ್ಲಿಂ ಮುಖಂಡರ ಅಭಿಪ್ರಾಯ ಪಡೆದು ಸಮವಸ್ತ್ರ ಕಡ್ಡಾಯ ಮಾಡಿ: ಉಮರ್ ಷರೀಫ್
ಕೇಂದ್ರೀಯ ವಿದ್ಯಾಲಯ, ಸಿಬಿಎಸ್ಸಿ ಬೋರ್ಡ್ಗಳ ಮಾದರಿಯಲ್ಲಿ ಸಮವಸ್ತ್ರ ನಿಯಮವನ್ನು ರಾಜ್ಯದಲ್ಲಿ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಇದಲ್ಲದೆ ಮುಂದಿನ ವರ್ಷದಿಂದ ಶಾಲಾ-ಕಾಲೇಜುಗೆ ಸೇರುವಾಗಲೇ ವಿದ್ಯಾರ್ಥಿಗಳಿಗೆ ನಿಯಮದ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಅಂಶ ಉಲ್ಲೇಖ ಮಾಡಲಾಗುತ್ತದೆ. ಶಿಕ್ಷಣ ಇಲಾಖೆಯಿಂದಲೇ ಶಾಲಾ ಮಕ್ಕಳಿಗೆ ಕೊಡುತ್ತಿರುವ ರೀತಿ 2 ಜೊತೆ ಸಮವಸ್ತ್ರ ಕೊಡುವ ಬಗ್ಗೆ ಚರ್ಚಿಸಲಾಗುವುದು. ಆರ್ಥಿಕ ಪರಿಸ್ಥಿತಿ ಹೊಂದಾಣಿಕೆ ಆದರೆ ಸರ್ಕಾರದಿಂದಲೇ ಸಮವಸ್ತ್ರ ನೀಡುವ ಚಿಂತನೆಯನ್ನು ಇಲಾಖೆ ಮಾಡಿದೆ.