ಬೆಂಗಳೂರು: ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ ಹಿನ್ನಲೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿ ಮೋದಿಗೆ ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಬಸವರಾಜ ಬೊಮ್ಮಾಯಿ ಬೆಂಗಳೂರಿನಿಂದ ವರ್ಚುಯಲ್ ಮೂಲಕ ಸಭೆಯಲ್ಲಿ ಭಾಗಿಯಾಗಿ ಪ್ರಧಾನಿ ಜೊತೆ 8 ರಿಂದ 10 ನಿಮಿಷ ಮಾತನಾಡಿದರು, ರಾಜ್ಯದ ಕೋವಿಡ್ ವಿವರ ಮೋದಿ ಮುಂದಿಟ್ಟ ಬೊಮ್ಮಾಯಿ, ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ತೆಗೆದುಕೊಂಡಿರೋ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಬೆಂಗಳೂರಿನಲ್ಲಿ ಕೇಸ್ ಹೆಚ್ಚಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಧಾನಿ ಮುಂದೆ ಸಿಎಂ ಸ್ಪಷ್ಟವಾಗಿ ಮಾಹಿತಿ ನೀಡಿದರು. ಲಸಿಕೆಯ ಅಂಕಿ ಅಂಶ, ಬೂಸ್ಟರ್ ಡೋಸ್ ಚುರುಕಿಗೆ ಕೈಗೊಂಡ ಕ್ರಮಗಳ ಬಗ್ಗೆ, ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿ ಮಾಡಿರುವ ಕುರಿತು, ನಿತ್ಯ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಿರುವ ಬಗ್ಗೆ ತಿಳಿಸಿದರು.
ಅಗತ್ಯ ಬೆಡ್ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗಳ ಸಿದ್ಧತೆ ಆಗಿದೆ. ಲಸಿಕೆ ಅಭಿಯಾನ ಚುರುಕು ಮಾಡಲಾಗಿದೆ. ಬಹುತೇಕ ಮೊದಲ ಡೋಸ್ 100% ಲಸಿಕೆ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು. ಸಭೆಯ ಆರಂಭದಲ್ಲಿ ಕರ್ನಾಟಕದ ಸ್ಥಿತಿ ಬಗ್ಗೆ ಮೋದಿ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ರಾಜ್ಯದಿಂದ ಸಿಎಂ ಬೊಮ್ಮಾಯಿ, ಸಚಿವರಾದ ಅಶ್ವತ್ಥ್ ನಾರಾಯಣ್, ಸುಧಾಕರ್, ಬಿ.ಸಿ ನಾಗೇಶ್, ಆರಗ ಜ್ಞಾನೇಂದ್ರ, ಸಿಎಸ್ ರವಿಕುಮಾರ್ ಮತ್ತಿತರರು ಭಾಗಿಯಾಗಿದ್ದರು.