– ಪ್ರತಿಭಟನೆ ನೆಪ; ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಜಪ
ನವದೆಹಲಿ: ದೇಶಾದ್ಯಂತ ಬಿಜೆಪಿಯಿಂದ ಮತಗಳವು ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ‘ವೋಟ್ ಚೋರಿ’ (Vote Chori) ವಿರುದ್ಧ ಕಾಂಗ್ರೆಸ್ (Congress) ಬೃಹತ್ ಕಹಳೆ ಮೊಳಗಿಸಿದೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆದಿದ್ದು, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ ಸಚಿವರು, ಶಾಸಕರು ಭಾಗವಹಿಸಿದ್ದಾರೆ.
ಪ್ರತಿಭಟನೆ ನೆಪವಾಗಿಟ್ಟುಕೊಂಡು ದೆಹಲಿಯಲ್ಲಿ ಹೈಕಮಾಂಡ್ ಭೇಟಿಗೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ. ವೋಟ್ ಚೋರಿ ಪ್ರತಿಭಟನೆ ನೆಪದಲ್ಲಿ ರಾಷ್ಟ್ರ ರಾಜಧಾನಿಗೆ ‘ಕೈ’ ನಾಯಕರ ದಂಡು ಭೇಟಿ ಕೊಟ್ಟಿದೆ. ದೆಹಲಿಯಲ್ಲಿ ವರಿಷ್ಠರ ಭೇಟಿಗೆ ಸಿಎಂ ಮತ್ತು ಡಿಸಿಎಂ ಎರಡು ಬಣಗಳ ಶಾಸಕರು, ಸಚಿವರಿಂದ ಪ್ರಯತ್ನ ನಡೆದಿದೆ. ಇದನ್ನೂ ಓದಿ: Video | ದೆಹಲಿಗೆ ಬಂದಿಳಿದ ಡಿಕೆಶಿ – ಸೋನಿಯಾ ಗಾಂಧಿ ಭೇಟಿ ಬಗ್ಗೆ ಗುಟ್ಟು ಬಿಟ್ಟುಕೊಡದ ಡಿಸಿಎಂ
ಇಂದು ಮತ್ತು ನಾಳೆ ದೆಹಲಿಯಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಉಳಿಯಲಿದ್ದಾರೆ. ನ್ಯಾಷನಲ್ ಹೆರಾಲ್ಡ್ಗೆ ಸಂಬಂಧಿಸಿದಂತೆ ಸಮನ್ಸ್ ಹಿನ್ನೆಲೆ ಡಿಸಿಎಂ ಉಳಿದುಕೊಳ್ಳಲಿದ್ದಾರೆ. ಸೋಮವಾರ ದೆಹಲಿ ಪೊಲೀಸರ ಮುಂದೆ ಡಿಕೆ ಬ್ರದರ್ಸ್ ಹಾಜರಾಗಲಿದ್ದಾರೆ. ಈ ಎರಡು ದಿನಗಳ ಅವಧಿಯಲ್ಲಿ ಸೋನಿಯಗಾಂಧಿ ಭೇಟಿಗೂ ಪ್ರಯತ್ನ ಸಾಧ್ಯತೆ ಇದೆ. ವೋಟ್ ಚೋರಿ ಪ್ರತಿಭಟನೆ ಬಳಿಕ ದೆಹಲಿಯಿಂದ ಸಿಎಂ ಸಿದ್ದರಾಮಯ್ಯ ವಾಪಸ್ ಆಗಲಿದ್ದಾರೆ. ಈ ನಡುವೆ ದೆಹಲಿಯಲ್ಲೇ ಕೂತು ಡಿಕೆ ಬ್ರದರ್ಸ್ ರಣತಂತ್ರ ಹೆಣೆದಿದ್ದಾರೆ.
ದೆಹಲಿಯಲ್ಲಿ ಡಿ.ಕೆ.ಶಿಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ಅಡಿಯಲ್ಲಿ ಮತ ಚಲಾಯಿಸಿಸುವುದು ಪ್ರತಿಯೊಬ್ಬನ ಕರ್ತವ್ಯ. 1 ಕೋಟಿ 33 ಲಕ್ಷ ಸಹಿ ಸಂಗ್ರಹ ಆಗಿದೆ ಎಂದು ತಿಳಿಸಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಬಿಜೆಪಿಯವರು ಕಳ್ಳರು. ಕಳ್ಳ ಮತಗಳಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚುಕ್ಕಾಣಿಯನ್ನ ಹಿಡಿದಿದ್ದಾರೆ. ಬಿಜೆಪಿ ಬಹಳಷ್ಟು ರಾಜ್ಯಗಳಲ್ಲಿ ವೋಟ್ ಚೋರಿಯಿಂದಲೇ ಅಧಿಕಾರಕ್ಕೆ ಬಂದಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಈ ಮೂಲಕ ಪ್ರಧಾನಿ ಮೋದಿ, ಎಲೆಕ್ಷನ್ ಕಮಿಷನ್, ಅಮಿತ್ ಶಾಗೆ ಪ್ರಶ್ನೆ ಮಾಡುತ್ತೇವೆ. ಚುನಾವಣಾ ಆಯೋಗ, ಇಡಿ, ಐಟಿ ಇವರ ನಿರ್ದೇಶನದಲ್ಲೇ ಕಾರ್ಯನಿರ್ವಹಿಸುತ್ತವೆ. ಬೆಂಗಳೂರು ಸೆಂಟ್ರಲ್, ಆಳಂದದಲ್ಲಿ ವೋಟ್ ಚೋರಿ ಆಗಿದೆ ಅಂತ ದಾಖಲೆ ಕೊಟ್ಟಿದ್ದೇವೆ. ಮುಂದಿನ ಚುನಾವಣೆಗಳಲ್ಲಿ ಮತಗಳ್ಳತನ ಮುಂದುವರೆಯಬಾರದು ಎಂಬುದು ಇದರ ಉದ್ದೇಶ ಎಂದು ತಿಳಿಸಿದ್ದಾರೆ.
ಸಚಿವ ಬೋಸರಾಜು ಪ್ರತಿಕ್ರಿಯಿಸಿ, ವೋಟ್ ಚೋರಿಗಾಗಿ ಪ್ರತಿಭಟಗೆ ದೆಹಲಿಗೆ ಆಗಮಿಸಿದ್ದೇವೆ. ಮಧ್ಯಾಹ್ನ ಎಐಸಿಸಿಗೆ ಹೋಗಿ ಅಲ್ಲಿಂದ ರಾಮಲೀಲಾ ಮೈದಾನಕ್ಕೆ ಹೋಗ್ತಿವಿ. ಹೈಕಮಾಂಡ್ ನಾಯಕರ ಜೊತೆಗೆ ಯಾವುದೇ ಚರ್ಚೆ ಇಲ್ಲ. ಐವತ್ತು ವರ್ಷದಿಂದ ಪಕ್ಷದಲ್ಲಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಮೆಸ್ಸಿ ಕಾರ್ಯಕ್ರಮದಲ್ಲಿ ಅವ್ಯವಸ್ಥೆ; ಮಮತಾ ಬ್ಯಾನರ್ಜಿ ಬಂಧನಕ್ಕೆ ಅಸ್ಸಾಂ ಸಿಎಂ ಆಗ್ರಹ
ಶಾಸಕ ಬಿಆರ್ ಪಾಟೀಲ್ ಮಾತನಾಡಿ, ಕರ್ನಾಟಕದಲ್ಲಿ ವೋಟ್ ಚೋರಿ ಆಗಿದೆ. ಕರ್ನಾಟಕಲ್ಲಿ ಇನ್ನೆರೆಡು ಮೂರು ಪ್ರಕರಣದಲ್ಲಿ ಹೀಗಾಗಿದೆ. ನನ್ನ ಹತ್ತಿರ ಮಾಹಿತಿ ಇದೆ. ನಮ್ಮ ವರಿಷ್ಠರು ಈ ಬಗ್ಗೆ ಕೇಳಿದಾಗ ಹೇಳುತ್ತೇನೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಮತಗಳ್ಳತನ ಆಗಿದೆ. ಬಿಜೆಪಿಯವರು ಕುತಂತ್ರದಿಂದ ಹೈಜಾಕ್ ಮಾಡಿ ಅಧಿಕಾರ ಪಡೆದಿದ್ದಾರೆ. ಜನಾದೇಶ ಅವರಿಗೆ ಕೊಡ್ತಿಲ್ಲ. ಹೀಗಾಗಿ ಬಿಜೆಪಿ ವೋಟ್ ಚೋರಿ ಮಾಡ್ತಿದೆ. ನಮ್ಮ ಪಕ್ಷದಿಂದ ಇಂದು ಬೃಹತ್ ಹೋರಾಟ ನಡೆಯುತ್ತಿದೆ. ಪ್ರಧಾನಿ ಮೋದಿ, ಅಮಿತ್ ಶಾ ಅಧಿಕಾರದಲ್ಲಿ ಮುಂದುವರೆಯಲು ಏನು ಬೇಕಾದ್ರೂ ಮಾಡಲು ತಯಾರಿದ್ದಾರೆ ಎಂದು ತಿಳಿಸಿದ್ದಾರೆ.
ಸಲೀಂ ಅಹಮದ್ ಮಾತನಾಡಿ, ಇದು ವೋಟ್ ಚೋರಿಯಲ್ಲ, ವೋಟ್ ಡಕಾಯಿತಿ. ಇದು ಮತಗಳ ಲೂಟಿ. ಅದು ಎಲೆಕ್ಷನ್ ಕಮಿಷನ್ ಅಲ್ಲ, ಬಿಜೆಪಿಯ ಕಮಿಷನ್. ಬಿಜೆಪಿ, ಎಲೆಕ್ಷನ್ ಕಮಿಷನ್ ಸೇರಿ ಮೂರು ರಾಜ್ಯಗಳಲ್ಲಿ ಗೆಲ್ಲಿಸಿದ್ದಾರೆ. ಬಿಹಾರ ಜನರ ಗೆಲುವಲ್ಲ, ಎಲೆಕ್ಷನ್ ಕಮಿಷನ್ ಗೆಲುವು. ಕೇಂದ್ರ ಸರ್ಕಾರದ ಗೆಲುವು. ಸಿಎಂ ನಿತೀಶ್ ಕುಮಾರ್ಗೆ ವಯಸ್ಸಾಗಿದೆ. ಹುಷಾರಿಲ್ಲ ಆದ್ರೂ ಗೆದ್ದಿದ್ದಾರೆ. ಅವರ ಗೆಲುವನ್ನ ನಂಬೋಕೆ ಆಗೋದಿಲ್ಲ. ಎಲೆಕ್ಷನ್ ಕಮಿಷನ್ನ ತಮ್ಮ ಕಪಿಮುಷ್ಟಿಯಲ್ಲಿ ಹಿಡಿದುಕೊಂಡು ಬಿಜೆಪಿ ಕೆಲಸ ಮಾಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸಚಿವ ಆರ್ಬಿ ತಿಮ್ಮಾಪುರ ಪ್ರತಿಕ್ರಿಯಿಸಿ, ಇಂದಿನ ದಿನಗಳಲ್ಲಿ ಮತಗಳ್ಳತನ ನಡೆಯುತ್ತಿದೆ. ಅಡ್ಡದಾರಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಿಜೆಪಿ ಹೊರಟಿದೆ. ಇದರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಶಾಸಕ ರವಿ ಗಣಿಗ ಮಾತನಾಡಿ, ಇಂದು ರಾಮ್ ಲೀಲಾ ಮೈದಾನದಲ್ಲಿ ಹೋರಾಟ ಮಾಡಲಾಗುತ್ತಿದೆ. ನಾವು ನಮ್ಮ ಕ್ಷೇತ್ರದಿಂದ 200 ಜನ ಕಾರ್ಯಕರ್ತರು ಬಂದಿದ್ದಾರೆ ಭಾಗವಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಸಚಿವರಾದ ಆರ್.ಬಿ.ತಿಮ್ಮಾಪುರ, ಮಂಕಾಳ ವೈದ್ಯ, ಮಾಜಿ ಸಚಿವ ತನ್ವಿರ್ ಸೇಠ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಆನೇಕಲ್ ಶಿವಣ್ಣ, ಎ.ಸಿ.ಶ್ರೀನಿವಾಸ್, ಪ್ರದೀಪ್ ಈಶ್ವರ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಎಂಎಲ್ಸಿಗಳಾದ ಪುಟ್ಟಣ್ಣ, ಮಂಜುನಾಥ್ ಭಂಡಾರಿ, ವಸಂತಕುಮಾರ್, ಬಸನಗೌಡ ಬಾದರ್ಲಿ, ಶ್ರೀನಿವಾಸ್, ಮಾಜಿ ಎಂಎಲ್ಸಿ ಯು.ಬಿ.ವೆಂಕಟೇಶ್ ಮತ್ತಿತರರು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕರ್ನಾಟಕ ಭವನದಲ್ಲಿ ಭಾನುವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಅವರ ಜೊತೆ ಡಿಸಿಎಂ ಅವರು ಉಪಾಹಾರ ಸೇವಿಸಿದರು.

