ಬೆಳಗಾವಿ: ಸಿಎಂ ಸಿದ್ದರಾಮಯ್ಯನವರು (CM Siddaramaiah) ಈಗಾಗಲೇ ಬರಾಕ್ ಒಬಾಮಾ (Barack Obama) ಅವರನ್ನು ಆಹ್ವಾನಿಸಿ ಪತ್ರವನ್ನು ಬರೆದಿರುತ್ತಾರೆ. ಡಿಸೆಂಬರ್ 26-27 ಅಥವಾ ಜನವರಿ 2025 ರಿಂದ ಅಕ್ಟೋಬರ್-2025ರೊಳಗಾಗಿ ದಿನಾಂಕ ನೀಡಲು ಕೋರಲಾಗಿದೆ. ಜಂಟಿ ಅಧಿವೇಶನವನ್ನು ಬೆಳಗಾವಿಯಲ್ಲಿಯೇ ನಡೆಸಲಾಗುವುದು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ (HK Patel) ತಿಳಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಧಿವೇಶನಕ್ಕೆ ಸಾಕ್ಷಿಯಾದ ಸ್ಥಳಗಳಿಗೆ ಭೇಟಿ ನೀಡಿ, ವಿಸ್ತೃತವಾಗಿ ಚರ್ಚಿಸಿದ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು. ಅಕ್ಟೋಬರ್ 2 ರಿಂದ ಒಂದು ವರ್ಷಗಳ ಕಾಲ ಶತಮಾನೋತ್ಸವ ವರ್ಷಾಚರಣೆ. ಅಂತಾರಾಷ್ಟೀಯ ಮಹತ್ವ ಪಡೆಯಲು ವಿಧಾನಮಂಡಳ ಜಂಟಿ ಅಧಿವೇಶನ ನಡೆಸಲು ಹಾಗೂ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಕರೆಸಲು ಉದ್ಧೇಶಿಸಲಾಗಿದೆ. ಗಾಂಧೀಜಿಯ (Mahatma Gandhi) ಕುರಿತು ವಿಶೇಷ ಅಭಿಮಾನ ಹೊಂದಿರುವ ಒಬಾಮಾ ಅವರು ಜಂಟಿ ಅಧಿವೇಶನ ಉದ್ಧೇಶಿಸಿ ಮಾತನಾಡಬೇಕು ಎಂಬುದು ಎಲ್ಲರ ಆಶಯ ಎಂದರು. ಇದನ್ನೂ ಓದಿ: ದೀಪಾವಳಿಯಂದು ಕೆಎಸ್ಆರ್ಟಿಸಿಗೆ ಬಂಪರ್ – ಒಂದೇ ದಿನ ಬರೋಬ್ಬರಿ 5.59 ಕೋಟಿ ಆದಾಯ
ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ಕಾಂಗ್ರೆಸ್ (Congress) ಅಧಿವೇಶನದ ಶತಮಾನ ಆಚರಣೆ ಮೂಲಕ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಇನ್ನಷ್ಟು ಪ್ರಚುಪಡಿಸಲು ಹಾಗೂ ಮನೆ ಮನೆಗೆ ಗಾಂಧೀಜಿ ಸಿದ್ಧಾಂತಗಳನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ. ಅರ್ಥಪೂರ್ಣ, ರಚನಾತ್ಮಕ ಕಾರ್ಯಕ್ರಮ ಆಯೋಜಿಸಲು ಗಾಂಧಿವಾದಿಗಳು, ಹಿರಿಯರ ಜತೆ ಚರ್ಚಿಸಿ ಅಧಿವೇಶನದ ಇತಿಹಾಸ ಮರುಸೃಷ್ಟಿ ಮತ್ತು ಮೆಲುಕು ಹಾಕಲು ಶತಮಾನೋತ್ಸವ ಆಚರಣೆ ಮಾಡಲಾಗುವುದು. ಇನ್ನು ಅಧಿವೇಶನ ಶತಮಾನೋತ್ಸವ ಆಚರಣೆಗೆ ಸರ್ಕಾರ 25 ಕೋಟಿ ರೂ. ನೀಡಲಿದ್ದು, ಅಗತ್ಯಬಿದ್ದರೆ ಹೆಚ್ಚುವರಿ ಅನುದಾನ ಕೂಡ ನೀಡಲಿದೆ ಎಂದು ಎಚ್.ಕೆ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯ ವೀರಸೌಧ, ಹುದಲಿ ಸೇರಿ ಮತ್ತಿತರ ಸ್ಥಳಗಳಿಗೆ ಎಚ್.ಕೆ.ಪಾಟೀಲ್ ಸೇರಿ ಮತ್ತಿತರರು ಭೇಟಿ ನೀಡಲಿದ್ದಾರೆ. ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಮಿತಿಯ ರಾಜ್ಯ ಸಂಚಾಲಕ ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ, ಸದಸ್ಯ ಎನ್.ಆರ್.ವಿಶುಕುಮಾರ್, ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಸೇರಿ ಮತ್ತಿತರರು ಈ ವೇಳೆ ಇದ್ದರು.