ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ: ಸಿಎಂಗೆ ಹೈಕಮಾಂಡ್ ಅಭಯ

Public TV
2 Min Read
congress high command meet

– ಕಾನೂನು ಹೋರಾಟದ ಮೂಲಕವೇ ಉತ್ತರ ನೀಡಿ
– ಸಿಎಂ ಮೇಲಿನ ದಾಳಿ ಹಿಂದುಳಿದ ನಾಯಕರ ವಿರುದ್ಧ ಎನ್ನುವಂತೆ ಬಿಂಬಿಸಲು ‘ಹೈ’ ಸೂಚನೆ

ನವದೆಹಲಿ: ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ. ಕಾನೂನು ಹೋರಾಟ ಮೂಲಕವೇ ಉತ್ತರ ನೀಡಿ ಎಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ಕಾಂಗ್ರೆಸ್ ಹೈಕಮಾಂಡ್ (Congress High Command) ಸಲಹೆ ನೀಡಿದೆ.

ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಮುಡಾ ಪ್ರಕರಣ ಸದ್ಯ ದೆಹಲಿ ಅಂಗಳ ತಲುಪಿದ್ದು, ಪ್ರಾಸಿಕ್ಯೂಷನ್ ಪ್ರಹಸನದ ಬಗ್ಗೆ ಸಿಎಂ-ಡಿಸಿಎಂ ಜಂಟಿಯಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ವಿವರಣೆ ನೀಡಿದ್ದಾರೆ. ಸಂಪುಟ ಸಭೆಯ ನಿರ್ಣಯ, ಶಾಸಕಾಂಗ ಪಕ್ಷದ ಸಭೆ, ಮುಡಾ (MUDA Scam) ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ 100 ಪುಟಗಳ ವರದಿ ಸಲ್ಲಿಸಿದ್ದಾರೆ. ಎಲ್ಲವನ್ನೂ ಕೇಳಿದ ಹೈಕಮಾಂಡ್, ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸಂಡೇ ಲಾಯರ್, ರಾಹುಲ್ ಗಾಂಧಿ ಮೌನ ಏಕೆ?: ಛಲವಾದಿ ನಾರಾಯಣಸ್ವಾಮಿ ಕಿಡಿ

congress leaders meet

ಕಾನೂನು ಹೋರಾಟ ನಡೆಸಿ, ನಾವಿದ್ದೇವೆ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ. ಅಲ್ಲದೇ, ಗ್ಯಾರಂಟಿಗಳನ್ನು ನೋಡಿ ಬಿಜೆಪಿ-ಜೆಡಿಎಸ್ ಹೆದರಿದೆ. ರಾಜ್ಯಪಾಲರನ್ನು ಬಳಸಿ ಹಿಂದುಳಿದ ನಾಯಕನ ಮೇಲೆ ದಾಳಿ ನಡೆಸುವ ಯತ್ನ ಮಾಡುತ್ತಿದೆ ಎಂದು ಹೈಕಮಾಂಡ್ ಆಪಾದಿಸಿದೆ.

ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ. ಪ್ರಕರಣ ಈಗ ಕಾನೂನು ವ್ಯಾಪ್ತಿಗೆ ಬಂದಿದೆ. ಕಾನೂನು ಹೋರಾಟದ ಮೂಲಕವೇ ಉತ್ತರ ನೀಡಿ. ಹೈಕೋರ್ಟ್ ಆಗಲಿ, ಸುಪ್ರೀಂ ಕೋರ್ಟ್ ಆಗಲಿ ಕಾನೂನು ಹೋರಾಟ ಮುಂದುವರಿಸಿ ಎಂದು ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಪರಿಷತ್ ಸದಸ್ಯ

ವಿಪಕ್ಷಗಳ ವಿಚಾರದಲ್ಲಿ ಮತ್ತಷ್ಟು ಅಗ್ರೆಸಿವ್ ಆಗಿ. ಗ್ಯಾರಂಟಿಯನ್ನೇ ಅಸ್ತ್ರ ಮಾಡಿಕೊಳ್ಳಿ. ಗ್ಯಾರಂಟಿ ಸಹಿಸದೇ ಬಿಜೆಪಿ, ಸಿಎಂ ವಿರುದ್ಧ ಆರೋಪ ಮಾಡುತ್ತಿದೆ. ಹೆಜ್ಜೆ ಹೆಜ್ಜೆಗೂ ರಾಜ್ಯಪಾಲರ ನಡೆ ಖಂಡಿಸಿ ಬಿಜೆಪಿ ಜೆಡಿಎಸ್ ಹೋರಾಟಗಳನ್ನು ಹೊರ ತನ್ನಿ. ಮುಲಾಜಿಲ್ಲದೇ ಮಾತನಾಡಿ. ಅಗತ್ಯ ಎನಿಸಿದ ಪ್ರಕರಣದಲ್ಲಿ ತನಿಖೆಗೆ ನೀಡಿ. ಯಾವುದೇ ಕಾರಣಕ್ಕೂ ಸಿಎಂ ವಿರುದ್ಧ ಮಾತನಾಡುವಂತಿಲ್ಲ. ಸಿಎಂ ಬೆನ್ನಿಗೆ ನಿಲ್ಲಬೇಕು, ಸರ್ಕಾರ ಪಕ್ಷದಲ್ಲಿ ಗೊಂದಲ ಇಲ್ಲದೇ ಒಟ್ಟಾಗಿ ಹೋರಾಡಿ ಎಂದು ರಾಜ್ಯ ನಾಯಕರಿಗೆ ಸಲಹೆ ನೀಡಿದ್ದಾರೆ.

ಸಿಎಂ ಮೇಲಿನ ದಾಳಿ ಹಿಂದುಳಿದ ನಾಯಕರ ವಿರುದ್ಧ ಷಡ್ಯಂತ್ರ ಎನ್ನುವಂತೆ ಬಿಂಬಿಸಿ. ರಾಷ್ಟ್ರಪತಿ ಬಳಿಗೆ ಹೋಗುವುದು ಮುಂದೆ ನಿರ್ಧರಿಸೋಣ. ರಾಷ್ಟ್ರಮಟ್ಟದಲ್ಲಿ ಇದು ಚರ್ಚೆಯಾಗಲಿದೆ. ಹೀಗಾಗಿ ಈ ಹೆಜ್ಜೆಯ ಬಗ್ಗೆ ನಾವು ಯೋಚಿಸಬೇಕಿದೆ ಎಂದು ತಿಳಿಸಿದ್ದಾರೆ.

Share This Article