– ಸಂಪುಟ ವಿಸ್ತರಣೆ ಬಗ್ಗೆ ಶಾ ಜೊತೆ ಚರ್ಚಿಸಿ- ನಡ್ಡಾ
ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ, ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಚರ್ಚೆ ನಡೆಸಿದರು. ಆದರೆ ಉಭಯ ನಾಯಕರು ಕೇವಲ 10 ನಿಮಿಷಗಳಲ್ಲಿ ಚರ್ಚೆ ಮುಗಿಸಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದಾರೆ. ಹೀಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಬಿಎಸ್ವೈ ಮೊದಲು ಭೇಟಿಯಾಗಲು ಕಾಯುತ್ತಿದ್ದರು. ಇತ್ತ ದೆಹಲಿ ಚುನಾವಣಾ ಪ್ರಚಾರದ ಹಿನ್ನೆಲೆ ಜೆ.ಪಿ.ನಡ್ಡಾ ಅವರು ರೊಹೀನಿ ವಿಧಾನಸಭೆ ಕ್ಷೇತ್ರದ ಡಿಸಿ ಚೌಕ್ನ ಸಮಾವೇಶದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಅವರು ತಡವಾಗಿ ದೆಹಲಿಯ ಮೋತಿ ಲಾಲ್ ನೆಹರು ಮಾರ್ಗ್ ನಿವಾಸಕ್ಕೆ ಆಗಮಿಸಿದರು ತಡವಾಗಿ ನಿವಾಸಕ್ಕೆ ಆಗಮಿಸಿದರು.
ಜೆ.ಪಿ.ನಡ್ಡಾ ಅವರು ನಿವಾಸಕ್ಕೆ ಆಗಮಿಸಿದ ವಿಚಾರ ತಿಳಿದು ಸಿಎಂ ಯಡಿಯೂರಪ್ಪ ನಡ್ಡಾ ಅವರ ನಿವಾಸಕ್ಕೆ ಆಗಮಿಸಿದರು. ಜೆ.ಪಿ.ನಡ್ಡಾ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರು ಭೇಟಿಯಾಗಿದ್ದರು. ಹೀಗಾಗಿ ಅವರನ್ನು ಬಿಎಸ್ ಯಡಿಯೂರಪ್ಪ ಅವರು ಸನ್ಮಾನಿಸಿದರು. ಆದರೆ ಉಭಯ ನಾಯಕರು ಕೇವಲ 10 ನಿಮಿಷಗಳಲ್ಲಿ ಚರ್ಚೆ ಮುಗಿಸಿದರು.
ಚರ್ಚೆ ವೇಳೆ ಜೆ.ಪಿ.ನಡ್ಡಾ ಅವರು, ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಿ. ಅವರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರು ಅಮಿತ್ ಶಾ ಅವರ ನಿವಾಸದತ್ತ ಪ್ರಯಾಣ ಬೆಳೆಸಿದರು.
ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ನಾಳೆ ಬೆಳಗ್ಗೆ ಬರುವಂತೆ ನಡ್ಡಾ ಅವರು ಸೂಚಿಸಿದ್ದಾರೆ. ಹೀಗಾಗಿ ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾ ಅವರನ್ನು ನಾಳೆ ಭೇಟಿಯಾಗಿ ಸಚಿವ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.