ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಎರಡು ದಿನಗಳಿಂದ ಒಂದು ರೀತಿಯಲ್ಲಿ ಪ್ರಕ್ಷುಬ್ಧವಾಗಿದ್ದ ಕರ್ನಾಟಕ ಶಾಂತವಾಗಿದೆ.
ಬೆಂಗಳೂರು, ಕಲಬುರಗಿ ಸೇರಿದಂತೆ ಎಲ್ಲಾ ಕಡೆ ಸಹಜ ಜೀವನ ಇದೆ. ಈ ಹಿಂದೆ ಹೇಳಿರುವಂತೆ ಮೂರನೇ ದಿನವಾದ ಇಂದು ಕೂಡ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಿಷೇಧಾಜ್ಞೆ ಮುಂದುವರಿದಿದೆ.
ಶುಕ್ರವಾರ ನಿಷೇಧಾಜ್ಞೆ, ಬಿಗಿ ಭದ್ರತೆ ನಡುವೆಯೂ ಟೌನ್ಹಾಲ್ನಲ್ಲಿ ಮಹ್ಮದ್ ಮತ್ತು ಎಲ್ಡೋ ಎಂಬ ಪ್ರತಿಭಟನಾಕಾರರು ಪ್ರತ್ಯೇಕವಾಗಿ ಪ್ರತಿಭಟನೆಗೆ ಮುಂದಾದ್ರು. ಆದರೆ ಪೊಲೀಸರು ಅವರಿಗೆ ಬುದ್ಧಿ ಹೇಳಿ ವಾಪಸ್ ಕಳಿಸಿದರು. ಸಂಜೆ ಸೆಂಟ್ರಲ್ ಕಾಲೇಜ್ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ರು. ಉಳಿದಂತೆ ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನೆ ನಡೆಯಲಿಲ್ಲ.
ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಅಂಟಿಕೊಂಡಿರುವ ಚಿಕ್ಕಮಗಳೂರಿನ ಕೆಲವೆಡೆ ಇಂಟgರ್ನೆಟ್ ಬಂದ್ ಮಾಡಲಾಗಿದೆ. ರಾಜ್ಯದಲ್ಲಿ ನಿಷೇಧಾಜ್ಞೆ ಹೇರಿಕೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ, ಸದ್ಯ ಪೊಲೀಸರು ವಿಧಿಸಿರುವ ನಿಷೇಧಾಜ್ಞೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಪ್ರತಿಭಟನೆ ನಡೆಸಲು ಬಯಸುವ ಸಂಘಟನೆಗಳು ಇಂದು ಹೊಸದಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಮೂರು ದಿನಗಳ ಒಳಗೆ ತೀರ್ಮಾನ ಮಾಡಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಜನವರಿ 7ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.