– ಗೆದ್ದ ಅನರ್ಹರ ಬೇಡಿಕೆ ಒಪ್ಪಿಕೊಳ್ತಾರಾ ಬಿಎಸ್ವೈ?
– ವೈರಿ ಡಿಕೆಶಿ ಬಳಿಯಿದ್ದ ಖಾತೆ ಮೇಲೆ ಜಾರಕಿಹೊಳಿಗೆ ಕಣ್ಣು
ಬೆಂಗಳೂರು: ಉಪ ಚುನಾವಣೆಯನ್ನು ಗೆದ್ದು ಸರ್ಕಾರವನ್ನು ಸುಭದ್ರಗೊಳಿಸಿದ ಯಡಿಯೂರಪ್ಪ ಮುಂದೆ ಈಗ ಹೊಸ ಸವಾಲು ಸೃಷ್ಟಿಯಾಗಿದೆ.
ಹೌದು. ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ಎಲ್ಲೇ ಹೋದರೂ ಅನರ್ಹರನ್ನು ಅರ್ಹರನ್ನಾಗಿ ಮಾಡಿದರೆ ಅವರಿಗೆ ಮಂತ್ರಿಪಟ್ಟ ಸಿಗುತ್ತದೆ ಎಂದು ಭಾಷಣ ಮಾಡಿದ್ದು ಅದರಂತೆ ಜನ ಈಗ ಅರ್ಹರನ್ನಾಗಿ ಮಾಡಿದ್ದಾರೆ.
ಅರ್ಹರಾದ 11 ಮಂದಿ ಈಗ ಸಿಎಂ ಬಳಿ ತಮ್ಮ ಬೇಡಿಕೆಯನ್ನು ಇಟ್ಟಿದ್ದು, ಈ ಬೇಡಿಕೆಯನ್ನು ಯಡಿಯೂರಪ್ಪ ಈಡೇರಿಸುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಮೂರು ನಾಲ್ಕು ದಿನದ ಒಳಗೆ ಸಿಎಂ ದೆಹಲಿಗೆ ತೆರಳಲಿದ್ದು ಹೈಕಮಾಂಡ್ ಜೊತೆ ಚರ್ಚಿಸಿ ಖಾತೆ ಹಂಚಿಕೆ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.
ಈಗಾಗಲೇ ಹಲವು ಪ್ರಮುಖ ಖಾತೆಗಳನ್ನು ಯಡಿಯೂರಪ್ಪ ತಮ್ಮ ಬಳಿಯೇ ಇಟ್ಟುಕೊಂಡಿದ್ದು ಕೆಲ ಖಾತೆಗಳನ್ನು ಮಾತ್ರ ಹಂಚಿಕೆ ಮಾಡಿದ್ದಾರೆ. ಮೊದಲೇ ತಮ್ಮ ಬಳಿ ಇಟ್ಟುಕೊಂಡ ಕಾರಣ ಖಾತೆ ಹಂಚಿಕೆ ಕಷ್ಟವಾಗಲಾರದು. ಆದರೆ ಜಿಲ್ಲಾ ಉಸ್ತುವಾರಿ ಖಾತೆಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಹೀಗಾಗಿ ಹೊಸ ಸಚಿವರಿಗೆ ಯಾವ ಜಿಲ್ಲೆಗಳನ್ನು ನೀಡಬಹುದು ಎನ್ನುವ ಪ್ರಶ್ನೆ ಎದ್ದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸುಧಾಕರ್, ಮಂಡ್ಯ ಜಿಲ್ಲೆ ನಾರಾಯಣ ಗೌಡರಿಗೆ ಸಿಗಬಹುದು. ಆದರೆ ಉಳಿದ ಶಾಸಕರಿಗೆ ಯಾವ ಜಿಲ್ಲೆ ಸಿಗಬಹುದು ಎನ್ನುವ ಕುತೂಹಲ ಹೆಚ್ಚಿದೆ. ಇದನ್ನೂ ಓದಿ: ಉಪ ಚುನಾವಣೆ ಸೋಲು – ಜಾತಿ ಸಮೀಕರಣ ಸೂತ್ರದ ಮೊರೆಹೋದ ಕಾಂಗ್ರೆಸ್
ಗೆದ್ದ ಶಾಸಕರು ಬಿಜೆಪಿ ಸರ್ಕಾರದಲ್ಲಿ ಪ್ರಮುಖ ಖಾತೆ ನೀಡಬೇಕೆಂದು ಪ್ರಸ್ತಾಪ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಬೆಳಗಾವಿ ರಾಜಕಾರಣದಲ್ಲಿ ಎಂಟ್ರಿಯಾಗಿದ್ದಕ್ಕೆ ಡಿಕೆ ಶಿವಕುಮಾರ್ ವಿರುದ್ಧ ಬಹಿರಂಗ ಹೇಳಿಕೆ ನೀಡಿ ತೊಡೆ ತಟ್ಟಿದ್ದ ರಮೇಶ್ ಜಾರಕಿಹೊಳಿ ದೋಸ್ತಿ ಸರ್ಕಾರದಲ್ಲಿ ಡಿಕೆಶಿ ಬಳಿಯಿದ್ದ ಜಲಸಂಪನ್ಮೂಲ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿಸಿದ್ದ ಡಾ ಸುಧಾಕರ್ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು ತರುತ್ತೇನೆ ಎಂದು ಜನರಿಗೆ ಆಶ್ವಾಸನೆ ನೀಡಿದ್ದರು. ಈ ಭರವಸೆಯನ್ನು ಈಡೇರಿಸಲು ವೈದ್ಯಕೀಯ ಶಿಕ್ಷಣ ಖಾತೆಯನ್ನು ಕೇಳಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.
ಯಾವ ಖಾತೆ ಮೇಲೆ ಯಾರಿಗೆ ಕಣ್ಣು?
ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ
ಎಸ್.ಟಿ.ಸೋಮಶೇಖರ್ – ಸಹಕಾರ
ಮಹೇಶ್ ಕುಮಟಹಳ್ಳಿ – ಸಣ್ಣ ಕೈಗಾರಿಕೆ
ಬೈರತಿ ಬಸವರಾಜು – ನಗರಾಭಿವೃದ್ಧಿ
ಶಿವರಾಮ್ ಹೆಬ್ಬಾರ್ – ಪೌರಾಡಳಿತ
ಶ್ರೀಮಂತಪಾಟೀಲ್ – ಸಕ್ಕರೆ
ಬಿ.ಸಿ.ಪಾಟೀಲ್ – ಕೃಷಿ
ಗೋಪಾಲಯ್ಯ- ಕಾರ್ಮಿಕ
ಸುಧಾಕರ್ – ವೈದ್ಯಕೀಯ ಶಿಕ್ಷಣ
ನಾರಾಯಣಗೌಡ – ತೋಟಗಾರಿಕೆ
ಆನಂದ್ ಸಿಂಗ್ – ಅರಣ್ಯ ಇಲಾಖೆ