ಹಾವೇರಿ: ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಅರುಣ್ ಕುಮಾರ್ ಪೂಜಾರ್ ಅವರಿಗೆ ನೀಡಲಾಗಿದೆ. ಅನರ್ಹ ಶಾಸಕ ಆರ್.ಶಂಕರ್ ಬಿಜೆಪಿ ಸೇರಿದ್ರೂ ಪಕ್ಷ ಟಿಕೆಟ್ ನೀಡಿರಲಿಲ್ಲ. ಬದಲಾಗಿ ಎಂ.ಎಲ್.ಸಿ ಮಾಡಿ ಸಚಿವರನ್ನಾಗಿ ಮಾಡಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ.
ಗುರುವಾರ 13 ಕ್ಷೇತ್ರಗಳಿಗೆ ಮಾತ್ರ ಬಿಜೆಪಿ ಟಿಕೆಟ್ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಆಕಾಂಕ್ಷಿಗಳು ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಆರ್. ಶಂಕರ್ ಅವರನ್ನ ಎಂ.ಎಲ್.ಸಿ ಮಾಡಿ ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದ ಬೆನ್ನಲ್ಲೇ ಕ್ಷೇತ್ರದ ಕಮಲ ನಾಯಕರು ಟಿಕೆಟ್ಗಾಗಿ ಜೋರು ಲಾಬಿ ನಡೆಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಸಜ್ಜನ, ಡಾ. ಬಸವರಾಜ್ ಕೇಲಗಾರ, ಸಚಿವ ಈಶ್ವರಪ್ಪ ಪುತ್ರ ಕಾಂತೇಶ್, ಪ್ರಕಾಶ್ ಬುರಡೀಕಟ್ಟಿ ಸೇರಿ ಹಲವರು ಟಿಕೆಟ್ ರೇಸ್ನಲ್ಲಿದ್ದರು.
ಆರ್ಎಸ್ಎಸ್ ಲಿಸ್ಟ್ ನಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದರಾಜ್ ಕಲಕೋಟಿ ಹೆಸರು ಕೇಳಿ ಬಂದಿತ್ತು. ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್ ಅವರೇ ಅಭ್ಯರ್ಥಿಯಾಗುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು. ಅಂತಿಮವಾಗಿ ಅರುಣ್ ಕುಮಾರ್ ಪೂಜಾರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.