ಕೇರಳ ಸ್ಟ್ರೈಕರ್ಸ್‌ ಮೇಲೆ ಕರ್ನಾಟಕ ಬುಲ್ಡೋಜರ್ಸ್‌ ಸವಾರಿ – ಕಿಚ್ಚನ ಸೈನ್ಯಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

Public TV
3 Min Read
Karnataka Bulldozers

ತಿರುನಂತಪುರಂ: ಭರ್ಜರಿ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಕಿಚ್ಚ ಸುದೀಪ್‌ (Kiccha Sudeep) ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್‌ (Karnataka Bulldozers) ತಂಡವು ಕೇರಳ ಸ್ಟ್ರೈಕರ್ಸ್‌ (Kerala Strikers) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಕೇರಳ ಸ್ಟ್ರೈಕರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಕರ್ನಾಟಕ ಬುಲ್ಡೋಜರ್ಸ್ ಪಾಯಿಂಟ್ ಪಟ್ಟಿಯಲ್ಲಿ ಏರಿಕೆ ಕಂಡಿದೆ. ಇದನ್ನೂ ಓದಿ: KCC 2023: ನಿನ್ನೆ ಪಂದ್ಯದಲ್ಲಿ ಸೋತವರು ಯಾರು? ಗೆದ್ದವರು ಯಾರು?

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೇರಳ ಸ್ಟ್ರೈಕರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿತು. ವಿಕೆಟ್ ಕೀಪರ್ ಬ್ಯಾಟರ್ ರಾಜೀವ್ ಪಿಳ್ಳೈ 32 ಎಸೆತಗಳಲ್ಲಿ 54 ರನ್ (4 ಬೌಂಡರಿ 3 ಸಿಕ್ಸರ್) ಸಿಡಿಸಿದರೆ, ನಾಯಕ ಉನ್ನಿ ಮುಕುಂದನ್ 10 ಎಸೆತಗಳಲ್ಲಿ 19 ರನ್ ಗಳಿಸಿ ತಂಡಕ್ಕೆ ನೆರವಾದರು.

ಈ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಪರ ಕರಣ್ ಆರ್ಯಾನ್ 2 ಓವರ್ ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರೇ, ಜಯರಾಮ್ ಕಾರ್ತಿಕ್, ಪ್ರದೀಪ್ ಬೋಗಾದಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ತಲಾ ಒಂದೊಂದು ವಿಕೆಟ್ ಕಿತ್ತರು. ಇದನ್ನೂ ಓದಿ: KCC-2023: ಪಂದ್ಯ ಗೆದ್ದು ಅಪ್ಪುಗೆ ಕೆಸಿಸಿ ಕಪ್ ಅರ್ಪಿಸಿದ ಧನಂಜಯ್ ಟೀಮ್

2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡಿದ ಕರ್ನಾಟಕ 5 ವಿಕೆಟ್ ಕಳೆದುಕೊಂಡು 124 ರನ್ ಗಳಿಸುವ ಮೂಲಕ 23 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. ಈ ವೇಳೆ ಪ್ರದೀಪ್ ಬೋಗಾದಿ ಮತ್ತು ಡಾರ್ಲಿಂಗ್ ಕೃಷ್ಣ ಉತ್ತಮ ಶುಭಾರಂಭ ನೀಡಿದ್ದರು. ಕೃಷ್ಣ 13 ಎಸೆತಗಳಲ್ಲಿ 20 ರನ್ ಗಳಿಸಿದರೆ, ಪ್ರದೀಪ್ 29 ಎಸೆತಗಳಲ್ಲಿ 59 ರನ್ (7 ಬೌಂಡರಿ 2 ಸಿಕ್ಸರ್) ಚಚ್ಚಿ ಮಿಂಚಿದರು. ರಾಜೀವ್ ಹನು, ಕರಣ್ ಆರ್ಯಾನ್ ತಲಾ 13 ರನ್ ಗಳಿಸಿದರು.

3ನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕೇರಳ ಸ್ಟ್ರೈಕರ್ಸ್ ತಂಡ 5 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿತು. ರಾಜೀವ್ ಪಿಳ್ಳೈ 18 ಎಸೆತಗಳಲ್ಲಿ 43 ರನ್ (3 ಬೌಂಡರಿ 3 ಸಿಕ್ಸರ್) ಚಚ್ಚಿ ಕೇರಳ ತಂಡಕ್ಕೆ ನೆರವಾದರು. ಆದರೆ 23 ರನ್‌ಗಳ ಮುನ್ನಡೆ ಕಾಯ್ದುಕೊಂಡಿದ್ದ ಕರ್ನಾಟಕ ತಂಡಕ್ಕೆ ಗೆಲುವಿಗಾಗಿ 83 ರನ್‌ಗಳ ಅವಶ್ಯಕತೆಯಿತ್ತು.

Karnataka Bulldozers 4

ಈ ವೇಳೆ ಆರಂಭಿಕರಾಗಿ ಕಣಕ್ಕಿಳಿದ ರಾಜೀವ್ ಹನು ಮತ್ತು ಜಯರಾಮ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ರಾಜೀವ್ ಹನು 14 ಎಸೆತಗಳಲ್ಲಿ 34 ರನ್ (3 ಬೌಂಡರಿ 2 ಸಿಕ್ಸರ್) ಗಳಿಸಿದರೇ, ಜಯರಾಮ್ ಕಾರ್ತಿಕ್ 13 ಎಸೆತಗಳಲ್ಲಿ 31 ರನ್ (5 ಬೌಂಡರಿ 1 ಸಿಕ್ಸರ್) ಗಳಿಸಿದರು. ಒಟ್ಟು 6.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದ ಕರ್ನಾಟಕ ಬುಲ್ಡೋಜರ್ಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಸಿಸಿಎಲ್ 20 ಪಂದ್ಯಾವಳಿಯಲ್ಲಿ 4 ಇನ್ನಿಂಗ್ಸ್‌ಗಳಲ್ಲಿ ಆಡಲಾಗುತ್ತದೆ. ಪ್ರತಿ 10 ಓವರ್ ಗಳಿಗೆ ಒಂದು ಇನ್ನಿಂಗ್ಸ್ ಎಂದು ಪರಿಗಣಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *