Bengaluru City
ನಿನ್ನಂಥ ಕ್ಷುಲ್ಲಕ, ಯೋಗ್ಯವಲ್ಲದ ವ್ಯಕ್ತಿ ಪಕ್ಷಕ್ಕೆ ಬೇಡ: ಈಶ್ವರಪ್ಪ ವಿರುದ್ಧ ಏಕವಚನದಲ್ಲಿ ಅಶ್ವಥ್ ನಾರಾಯಣ ವಾಗ್ದಾಳಿ

ಬೆಂಗಳೂರು: ನೀನು ಪಕ್ಷದಲ್ಲಿ ಇಷ್ಟು ದೊಡ್ಡವನಾಗಿದ್ದು ಹೇಗೆ? ಬೆಳೆದು ಬಂದಿದ್ದು ಹೇಗೆ ಅಂತ ಯೋಚಿಸು ಎಂದು ಈಶ್ವರಪ್ಪ ವಿರುದ್ಧ ಶಾಸಕ ಅಶ್ವಥ್ ನಾರಾಯಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ಜಿಲ್ಲೆಯ ಬಿಜೆಪಿ ಪಕ್ಷದ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿದ್ದ ‘ಸಂಘಟನೆ ಉಳಿಸಿ ಸಮಾವೇಶ’ದಲ್ಲಿ ಬಿಎಸ್ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಕ್ಕೆ ಮಲ್ಲೇಶ್ವರಂ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಎಸ್ವೈ ಬಣ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಶ್ವಥ್ ನಾರಾಯಣ, ಯಾರು ಪಕ್ಷದಲ್ಲಿ ಯಡಿಯೂರಪ್ಪ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೋ ಅವರು ಪಕ್ಷಕ್ಕೆ ಬೇಕಿಲ್ಲ. ನಿನ್ನಂಥ ಕ್ಷುಲ್ಲಕ, ಯೋಗ್ಯವಲ್ಲದ ವ್ಯಕ್ತಿ ಪಕ್ಷಕ್ಕೆ ಬೇಡ. ನೀನು ಪಕ್ಷದಲ್ಲಿ ಇಷ್ಟು ದೊಡ್ಡವನಾಗಿದ್ದು ಹೇಗೆ? ಬೆಳೆದು ಬಂದಿದ್ದು ಹೇಗೆ ಅಂತ ಯೋಚಿಸು ಎಂದು ಪ್ರಶ್ನಿಸಿ ಕಿಡಿಕಾರಿದರು.
ಅತೃಪ್ತರ ಸಭೆ ನಡೆದಿದ್ದು ಖಂಡನೀಯವಾಗಿದ್ದು, ಪಕ್ಷದ ಸಂಘಟನೆಯಲ್ಲಿ ಇಂತಹ ಸಭೆಗಳು ಸರಿಯಲ್ಲ. ಪಕ್ಷ ಸಂಘಟನೆ ಬಗ್ಗೆ ನಾವೆಲ್ಲ ಶ್ರಮಿಸುತ್ತಿದ್ದೇವೆ. ಆದರೆ ಈ ಅತೃಪ್ತರು ಪಕ್ಷದ ಸಂಘಟನೆ ಹಾಳು ಮಾಡುತ್ತಿದ್ದಾರೆ. ಕೂಡಲೇ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರು ವಿರುದ್ಧ ಕ್ರಮ ಕೈಗೊಳ್ಳಬೇಕು. ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡವರಿಗೆ ವಿಪಕ್ಷ ನಾಯಕ ಸ್ಥಾನ ಕೊಟ್ಟಿದ್ದು ನಮಗೆ ಅಗೌರವ. ಯೋಗ್ಯತೆ ಗೊತ್ತಿದೆ, ಕೂಡಲೇ ಈಶ್ವರಪ್ಪ ಅವರನ್ನ ಪಕ್ಷದಿಂದ ಕಿತ್ತು ಹಾಕಲಿ ಎಂದು ಅಶ್ವಥನಾರಾಯಣ ಆಗ್ರಹಿಸಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ ಈಶ್ವರಪ್ಪನವರು ನಾಲ್ಕು ಗೋಡೆಗಳ ಮಧ್ಯೆ ಸಮಸ್ಯೆ ಬಗೆಹರಿಸಿಕೊಳ್ಳಬೇಕಿತ್ತು. ಈಶ್ವರಪ್ಪ ಕರೆದಿದ್ದ ಸಭೆಗೆ ಸಾವಿರ ಜನ ಇರಲಿಲ್ಲ ಬಿಎಸ್ವೈ ಸಭೆ ಕರೆದ್ರೆ 2 ಲಕ್ಷ ಜನ ಬರುತ್ತಾರೆ. ಇದು ಪಕ್ಷ ವಿರೋಧಿ ಚಟುವಟಿಕೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮುನಿರಾಜು, ನಾರಾಯಣಸ್ವಾಮಿ, ಪರಿಷತ್ ಸದಸ್ಯರಾದ ಪುಟ್ಟಸ್ವಾಮಿ, ಲೆಹರ್ ಸಿಂಗ್, ಮಾಜಿ ಶಾಸಕ ಕಟ್ಟಾ ಸುಬ್ರಮಣ್ಯನಾಯ್ಡು, ಬೆಂಗಳೂರು ನಗರಾಧ್ಯಕ್ಷ ಸದಾಶಿವ ಉಪಸ್ಥಿತರಿದ್ದರು.
ಇದನ್ನೂ ಓದಿ: ಸಮಸ್ಯೆ ಪರಿಹಾರಕ್ಕೆ ಬಿಎಸ್ವೈಗೆ ಭಿನ್ನರಿಂದ ಡೆಡ್ಲೈನ್ ಫಿಕ್ಸ್
https://www.youtube.com/watch?v=nFYZuu2deRU
ಇದನ್ನೂ ಓದಿ: ನಾವು ತಂದೆ, ತಾಯಿಗೆ ಹುಟ್ಟಿದ ಜನ. ನಾವು ಪಕ್ಷ ಬಿಡಲ್ಲ, ಬೇರೆ ಪಕ್ಷ ಕಟ್ಟಲ್ಲ: ಬಿಎಸ್ವೈ ವಿರುದ್ಧ ಈಶ್ವರಪ್ಪ ಗುಡುಗು
ಇದನ್ನೂ ಓದಿ: ಬಿಜೆಪಿ ಸಂಘಟನಾ ಸಮಾವೇಶದಲ್ಲಿ ಬಿಎಸ್ವೈ-ಈಶ್ವರಪ್ಪ ಬೆಂಬಲಿಗರ ಮಾರಾಮಾರಿ: ವಿಡಿಯೋ ನೋಡಿ
https://www.youtube.com/watch?v=FnDvcFgKDoQ
