– ವಿಜಯೇಂದ್ರ ಬದಲಾವಣೆಗೆ ಭಿನ್ನರು ಮತ್ತೆ ಪಟ್ಟು, ಪ್ರತ್ಯೇಕ ಸಭೆ
– ರೆಬೆಲ್ಸ್ ಜತೆ ಬಹಿರಂಗವಾಗಿ ಗುರುತಿಸಿಕೊಂಡ ವಿ ಸೋಮಣ್ಣ
ಬೆಂಗಳೂರು: ಬಿಜೆಪಿ (BJP) ಮನೆಯಲ್ಲಿ ಮತ್ತೆ ಭಿನ್ನಮತ ವಿರಾಟ್ ದರ್ಶನ. ಹೌದು, ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಸುಳಿವು ಸಿಕ್ಕ ಕೂಡಲೇ ಭಿನ್ನರು ಅಲರ್ಟ್ ಆಗಿದ್ದಾರೆ. ಗುರುವಾರ ತಡರಾತ್ರಿ ರೆಬೆಲ್ಸ್ ತಂಡ ವಿಜಯೇಂದ್ರ (BY Vijayendra) ಬದಲಾವಣೆ ಆಗಲೇಬೇಕೆಂಬ ಸಂದೇಶ ರವಾನಿಸಿದೆ. ರೆಬೆಲ್ಸ್ ಜತೆ ಕೇಂದ್ರ ಸಚಿವ ವಿ ಸೋಮಣ್ಣ (V Somanna) ಬಹಿರಂಗವಾಗಿಯೇ ಗುರುತಿಸಿಕೊಂಡಿದ್ದು ಗೊಂದಲ ಮತ್ತಷ್ಟು ಸಂಕೀರ್ಣವಾದಂತಿದೆ. ಅಮಿತ್ ಶಾ (Amit Shah) ರಾಜ್ಯ ಭೇಟಿ ಸಂದರ್ಭದಲ್ಲೇ ಗುಂಪುಗಾರಿಕೆ ತಾರಕಕ್ಕೇರಿದೆ.
ಬಿಜೆಪಿ ಗೊಂದಲ ಮುಗಿದಿದೆ ಎಂದು ಒಂದು ಕಡೆ ಹೈಕಮಾಂಡ್ ರಾಜ್ಯಾಧ್ಯಕ್ಷರ ಚುನಾವಣೆ ನಡೆಸುವ ಸುಳಿವು ಕೊಟ್ಟಿದೆ. ಆದರೆ ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಎನ್ನುವಂತೆ ಕಮಲ ಪಾಳಯದಲ್ಲಿ ಮತ್ತೆ ಭಿನ್ನಮತೀಯ ಚಟುವಟಿಕೆ ತೀವ್ರಗೊಂಡಿದೆ. ಯತ್ನಾಳ್ (Basangouda Patil Yatnal) ಉಚ್ಛಾಟನೆ ಬಳಿಕ ಮೌನವಾಗಿದ್ದ ಭಿನ್ನರ ಪಡೆ ಈಗ ಬೇರೊಂದು ರೂಪದಲ್ಲಿ ಪುಟಿದೆದ್ದಿದೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಕೆಲವರಿಗೆ ಅತೃಪ್ತಿ ಇರೋದು ಸತ್ಯ – ಬಿವೈವಿ
ವಿಜಯೇಂದ್ರ ಬದಲಾವಣೆಗೆ ಪಟ್ಟು ತೀವ್ರಗೊಳಿಸಿರುವ ರೆಬೆಲ್ಸ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ನೇತೃತ್ವದಲ್ಲಿ ತಡರಾತ್ರಿ ಪ್ರತ್ಯೇಕ ಸಭೆ ನಡೆಸಿದೆ. ವಿಶೇಷ ಅಂದ್ರೆ ಈ ಸಭೆಯಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಸಚಿವ ವಿ ಸೋಮಣ್ಣ ಇದೇ ಮೊದಲ ಬಾರಿಗೆ ಭಿನ್ನರ ಜತೆ ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ. ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಅವರ ಬೆಂಗಳೂರಿನ ಫ್ಲ್ಯಾಟ್ನಲ್ಲಿ ಸಭೆ ನಡೆಸಿದ್ದ ಭಿನ್ನರು ಶತಾಯಗತಾಯ ವಿಜಯೇಂದ್ರ ಬದಲಾಗಲೇಬೇಕೆಂಬ ಸಂದೇಶ ರವಾನಿಸಿದ್ದಾರೆ. ವಿ ಸೋಮಣ್ಣ ಮೂಲಕ ಅಮಿತ್ ಶಾ ಅವರಿಗೆ ಭಿನ್ನರು ಈ ಸಂದೇಶ ತಲುಪಿಸಿದ್ದಾರೆ ಎನ್ನಲಾಗಿದೆ. ಜತೆಗೆ ಇದೇ ಜೂ.23, 24 ರಂದು ದೆಹಲಿಗೂ ಹೋಗಲು ರೆಬೆಲ್ಸ್ ನಿರ್ಣಯಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಚೇರಿಗೆ ದಿಢೀರ್ ಭೇಟಿ – ಅಸಮಾಧಾನಿತರ ಜೊತೆ ಮಾತುಕತೆಗೆ ಸಿದ್ಧ ಎಂದ ಬಿಎಸ್ವೈ
ಗೃಹ ಸಚಿವ ಅಮಿತ್ ಶಾ ಬಿಜಿಎಸ್ ಮೆಡಿಕಲ್ ಕಾಲೇಜು ಉದ್ಘಾಟನೆಗೆ ಬೆಂಗಳೂರಿಗೆ ಬಂದಿದ್ದರು. ಅಮಿತ್ ಶಾ ಬಂದ ಸಂದರ್ಭದಲ್ಲೇ ಭಿನ್ನ ರಾಗ ಮೊಳಗಿದ್ದು ಉದ್ದೇಶಪೂರ್ವಕವಾಗಿಯೇ ಎನ್ನಲಾಗ್ತಿದೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಭಿನ್ನರ ಜತೆ ಸಂಧಾನ ಸಭೆ ನಡೆಸಿದರೂ ಅದು ಯಶಸ್ಸಾಗಲಿಲ್ಲ. ಭಿನ್ನರು ತಮ್ಮ ಪಟ್ಟು ಸಡಿಲಿಸಿಲ್ಲ.
ಭಿನ್ನರ ಸಭೆ ಬಗ್ಗೆ ಮಾತಾಡಿರುವ ವಿಜಯೇಂದ್ರ, ಕೆಲವರಿಗೆ ತಮ್ಮ ವಿಚಾರದಲ್ಲಿ ಅತೃಪ್ತಿ ಇದೆ. ಎಲ್ಲವೂ ಶೀಘ್ರದಲ್ಲೇ ಸರಿ ಹೋಗಲಿದೆ. ಪ್ರಮುಖರು ಕೂತು ಸರಿಪಡಿಸ್ತೇವೆ. ಒಳಜಗಳ ಬಿಟ್ಟು ಎಲ್ರೂ ಒಟ್ಟಾಗಬೇಕಿದೆ. ಅವರ ಮನವೊಲಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ವಿಜಯೇಂದ್ರ ವಿರುದ್ಧ ಕಳೆದೊಂದು ವಾರದಿಂದಲೂ ಭಿನ್ನರು,ಬಿಜೆಪಿ ತಟಸ್ಥರು ಹಾಗೂ ಹಿರಿಯರ ಬೆಂಬಲ ಪಡೆಯುವ ಕಸರತ್ತಿಗಿಳಿದಿದ್ರು. ಈಗಾಗಲೇ ಬೊಮ್ಮಾಯಿ, ಆರ್ ಅಶೋಕ್, ಡಿವಿಎಸ್, ವಿ ಸೋಮಣ್ಣ, ಶೋಭಾ ಕರಂದ್ಲಾಜೆ ಭೇಟಿ ಮಾಡಿ ಸಮಾಲೋಚಿಸಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಯೊಳಗೆ ವಿಜಯೇಂದ್ರ ಪರ ಅನೇಕರು ಇಲ್ಲ ಎಂಬ ಸಂದೇಶ ಹೈಕಮಾಂಡ್ಗೆ ರವಾನಿಸುವ ಪ್ರಯತ್ನ ನಡೆಸಿದ್ದಾರೆ.
ಇದೆಲ್ಲದರ ಮಧ್ಯೆ ಮಾಜಿ ಸಿಎಂ ಯಡಿಯೂರಪ್ಪ ಪುತ್ರನ ಪರ ಅಖಾಡಕ್ಕಿಳಿದಿದ್ದಾರೆ. ಗುರುವಾರ ತಡರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ಅಮಿತ್ ಶಾ ಭೇಟಿ ಮಾಡಿದ ಯಡಿಯೂರಪ್ಪ ಪಕ್ಷದ ಆಂತರಿಕ ವಿಚಾರ ಚರ್ಚೆ ಮಾಡಿದ್ದಾರೆ. ವಿಜಯೇಂದ್ರ ಸಾರಥ್ಯ ಸಾಧನೆ ಬಗ್ಗೆಯೂ ಅಮಿತ್ ಶಾಗೆ ಬಿಎಸ್ವೈ ಸೂಕ್ಷ್ಮವಾಗಿ ಹೇಳಿದ್ದಾರೆ ಎನ್ನಲಾಗಿದೆ.