– ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಬಿ.ವೈ ರಾಘವೇಂದ್ರ ಮನವಿ
– ಲೋಕಸಭೆ ಶೂನ್ಯವೇಳೆಯಲ್ಲಿ ರಾಜ್ಯ ಬಿಜೆಪಿ ಸಂಸದರ ದನಿ
ನವದೆಹಲಿ: ಸಂಸ್ಕರಿಸಿದ ಆಹಾರಗಳ (Ultra Processed Foods) ಸೇವನೆಯಿಂದಾಗುವ ಅಪಾಯಗಳು, ರೈತರ ಸಮಸ್ಯೆಗಳು ಹಾಗೂ ರಿಂಗ್ ರಸ್ತೆಗೆ ಭೂಮಿ ನೀಡಿದ ರೈತರ ಸಮಸ್ಯೆಗಳ ಬಗ್ಗೆ ಇಂದು ಲೋಕಸಭೆಯ ಶೂನ್ಯ ವೇಳೆಯಲ್ಲಿ ರಾಜ್ಯ ಬಿಜೆಪಿ ಸಂಸದರು ದನಿ ಎತ್ತಿದರು. ಸಂಸದರಾದ ತೇಜಸ್ವಿ ಸೂರ್ಯ (Tejsvi Surya), ಬಿ.ವೈ ರಾಘವೇಂದ್ರ ಮತ್ತು ಡಾ.ಸಿ.ಎನ್ ಮಂಜುನಾಥ್ (Dr. CN Manjunath) ಅವರು ವಿವಿಧ ವಿಷಯಗಳ ಕುರಿತು ಮಾತನಾಡಿ, ಸರ್ಕಾರದ ಗಮನ ಸೆಳೆದರು. ಮಕ್ಕಳ ಆರೋಗ್ಯ, ರೈತರ ಪರಿಸ್ಥಿತಿ ಮತ್ತು ಅಭಿವೃದ್ಧಿ ಯೋಜನೆಗಳ ಪರಿಹಾರದಂತಹ ಮಹತ್ವದ ಸಮಸ್ಯೆಗಳನ್ನ ಅವರು ಪ್ರಸ್ತಾಪಿಸಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಂಸ್ಕರಿಸಿದ ಆಹಾರ ಉತ್ಪನ್ನಗಳಿಂದಾಗುವ ಅಪಾಯಗಳ ಬಗ್ಗೆ ಮಾತನಾಡಿ, ಇದರಿಂದ ಮಕ್ಕಳಲ್ಲಿ ಒಬೆಸಿಟಿ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನೂಡಲ್ಸ್, ಕೂಲ್ ಡ್ರಿಂಕ್ಸ್ ಸೇರಿದಂತೆ ಹತ್ತಾರು ಉತ್ಪನ್ನಗಳನ್ನು ಮಕ್ಕಳು ಹೆಚ್ಚು ಸೇವಿಸುತ್ತಿರುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಸಂಸ್ಕರಿಸಿದ ಆಹಾರ ಉತ್ಪನ್ನಗಳಿಗೆ ಸರಿಯಾದ ವ್ಯಾಖ್ಯಾನ ಮಾಡಬೇಕು ಮತ್ತು ಪ್ಯಾಕೇಜಿಂಗ್ ಮೇಲೆ ಅದನ್ನು ಸ್ಪಷ್ಟವಾಗಿ ನಮೋದಿಸಬೇಕು ಎಂದು ಆಗ್ರಹಿಸಿದರು. ಮಕ್ಕಳಿಗೆ ಇಂತಹ ಉತ್ಪನ್ನಗಳ ಸೇವನೆ ನಿರ್ಬಂಧಿಸುವ ನಿಟ್ಟಿನಲ್ಲಿ ಸರ್ಕಾರ ಜಾಹೀರಾತು ಪ್ರಕಟಿಸಬೇಕು ಎಂದು ಮನವಿ ಮಾಡಿದರು.
ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಬಿ.ವೈ ರಾಘವೇಂದ್ರ
ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ (BY Raghavendra) ಅವರು ಮಲೆನಾಡು ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಅಡಿಕೆ ಬೆಳೆಗಾರರು ಹಳದಿ ರೋಗದಿಂದ ಬಳಲುತ್ತಿದ್ದು, ಅತಿ ಹೆಚ್ಚು ಮಳೆಯಿಂದಾಗಿ ಹಾನಿಗೊಳಗಾಗಿದ್ದಾರೆ ಎಂದು ಹೇಳಿದರು.

ಹವಾಮಾನ ಆಧರಿತ ವಿಮೆ ನಿಯಮಗಳಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಒತ್ತಾಯಿಸಿದ ಅವರು, ಹಲವು ಹವಮಾನ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಮಳೆಯ ಪ್ರಮಾಣ ಸರಿಯಾಗಿ ದಾಖಲಾಗುತ್ತಿಲ್ಲ. ಇದರಿಂದಾಗಿ ರೈತರಿಗೆ ಪರಿಹಾರ ಸಿಗದಿರುವುದನ್ನು ಸುಧಾರಿಸಲು ವಿಮೆ ನಿಯಮಗಳನ್ನ ಬದಲಿಸಬೇಕು ಮತ್ತು ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ರೈತರಿಗೆ ಪರಿಹಾರ ನೀಡುವಂತೆ ಡಾ.ಮಂಜುನಾಥ್ ಆಗ್ರಹ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಸಿ.ಎನ್ ಮಂಜುನಾಥ್ ಅವರು ಸ್ಯಾಟಲೈಟ್ ರಿಂಗ್ ರೋಡ್ ಯೋಜನೆಯ ಕುರಿತು ಮಾತನಾಡಿದರು. 2021ರಲ್ಲಿ ಯೋಜನೆಗಾಗಿ 2,200 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಆದರೂ, ರೈತರಿಗೆ ಈವರೆಗೂ ಪರಿಹಾರ ನೀಡಿಲ್ಲ ಎಂದು ಆಕ್ಷೇಪಿಸಿದರು. ತಾನು ಪ್ರಧಾನಿ ಕಚೇರಿ (ಪಿಎಂಓ) ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ, ರೈತರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ಸರ್ಕಾರ ಅವರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

