ಬೆಂಗಳೂರು: ಜುಲೈ 28 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷ ತುಂಬಿದ ಹಿನ್ನೆಲೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಸಮಾವೇಶ ನಡೆಸಲು ಉದ್ದೇಶಿಸಲಾಗಿತ್ತು. ಬಳಿಕ ಕೊನೆ ಗಳಿಗೆಯಲ್ಲಿ ಕಾರ್ಯಕ್ರಮ ರದ್ದಾಗಿತ್ತು. ಇದೀಗ ಸರ್ಕಾರ ಜನೋತ್ಸವವನ್ನು ಮತ್ತೆ ನಡೆಸಲು ತೀರ್ಮಾನಿಸಿದೆ.
ಜುಲೈ 28ರ ಜನೋತ್ಸವ ಸಮಾವೇಶ ದಕ್ಷಿಣ ಕನ್ನಡದಲ್ಲಿ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಕೊನೆ ಗಳಿಗೆಯಲ್ಲಿ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ದೊಡ್ಡಬಳ್ಳಾಪುರದಲ್ಲೇ ಸಮಾವೇಶ ನಡೆಸಲು ಸರ್ಕಾರ ಮುಂದಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಮತ್ತು ಸಿದ್ದರಾಮೋತ್ಸವ ಬಳಿಕ ಕಳೆದುಕೊಂಡಿದ್ದ ರಾಜಕೀಯ ಚಾರ್ಮ್ ಪಡೆದುಕೊಳ್ಳಲು, ಪಕ್ಷ, ಸರ್ಕಾರದಲ್ಲಿ ಉತ್ಸಾಹ ತರಲು ದೊಡ್ಡಬಳ್ಳಾಪುರ ಜನೋತ್ಸವ ನಡೆಸಲು ನಿರ್ಧರಿಸಲಾಗಿದೆ. ಇದೇ ತಿಂಗಳ 28 ರಂದು ದೊಡ್ಡಬಳ್ಳಾಪುರದಲ್ಲೇ ಸಮಾವೇಶ ನಡೆಸಿ 1 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದನ್ನೂ ಓದಿ: ಇಂದಿನಿಂದ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ
ಸಮಾವೇಶಕ್ಕೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಿಂದ ಜನ ಕರೆತರಲಾಗುತ್ತಿದೆ. ಈ ಬಾರಿ ಸರ್ಕಾರದ 3 ವರ್ಷದ ಜನೋತ್ಸವ ಎಂದು ಬಿಂಬಿಸಲು ತೀರ್ಮಾನಿಸಲಾಗಿದೆ. ಇತ್ತ ರದ್ದಾಗಿದ್ದ ದೊಡ್ಡಬಳ್ಳಾಪುರ ಜನೋತ್ಸವವನ್ನು ಮತ್ತೆ ನಡೆಸುತ್ತಿರುವ ಸರ್ಕಾರದ ನಡೆ ಪಕ್ಷದಲ್ಲಿ ನಾನಾ ಚರ್ಚೆಗಳಿಗೆ ಕಾರಣವಾಗಿದೆ. ಅದೂ ಅಲ್ಲದೇ ಮೊದಲ ಬಾರಿ ಜನೋತ್ಸವ ಸಮಾವೇಶ ಮಾಡಲು ನಿರ್ಧರಿಸಿದಾಗ ಇದ್ದ ಉತ್ಸಾಹ ಈಗ ಸರ್ಕಾರ ಮತ್ತು ಪಕ್ಷದಲ್ಲಿ ಕಂಡುಬರುತ್ತಿಲ್ಲ. ಕೆಲ ನಾಯಕರಿಗೆ ಮತ್ತೆ ಜನೋತ್ಸವ ಅಚ್ಚರಿ ತಂದಿದೆ. ಯಡಿಯೂರಪ್ಪ ಜೊತೆ ಸಿಎಂ ಚರ್ಚಿಸಿದ್ದು, ಈಗಿನ ಸಮಾವೇಶಕ್ಕೂ ಹೈಕಮಾಂಡ್ ನಾಯಕರಿಗೆ ಆಹ್ವಾನ ಕೊಡ್ತಾರಾ ಅನ್ನೋ ಬಗ್ಗೆ ಸ್ಪಷ್ಟತೆ ಇಲ್ಲ. ಮೂಲಗಳ ಪ್ರಕಾರ ಸದ್ಯದ ಸನ್ನಿವೇಶ ಸರಿ ಇಲ್ಲದ ಕಾರಣ ದೊಡ್ಡಬಳ್ಳಾಪುರದಲ್ಲಿ ರಾಜ್ಯ ನಾಯಕರೇ ಯಡಿಯೂರಪ್ಪ ನೇತೃತ್ವದಲ್ಲಿ ಜನೋತ್ಸವ ನಡೆಸಲುದ್ದೇಶಿಸಿದ್ದಾರೆ ಎನ್ನಲಾಗಿದೆ. ಈ ಸಮಾವೇಶದ ಬಳಿಕ ಜಿಲ್ಲಾ ಸಮಾವೇಶಗಳ ಬಳಿಕ ಅಕ್ಟೋಬರ್ ಅಂತ್ಯದಲ್ಲಿ ಸಮಾರೋಪ ಸಮಾವೇಶವನ್ನು ದಾವಣಗೆರೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅಥವಾ ಜೆ.ಪಿ ನಡ್ಡಾ ಕರೆಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ವೈಯಕ್ತಿಕ ಬಳಕೆಗಾಗಿ ಬಾಡಿಗೆ ನೀಡಿದ್ದರೆ ಜಿಎಸ್ಟಿ ಇಲ್ಲ- ಕೇಂದ್ರ
ಇತ್ತ ಸರ್ಕಾರದ ಜನೋತ್ಸವಕ್ಕೆ ಕಾಂಗ್ರೆಸ್ನ ಜನಾಕ್ರೋಶದ ಕೌಂಟರ್ಗೆ ಸಿದ್ಧತೆ ಆರಂಭವಾಗಿದೆ. ಆಗಸ್ಟ್ 15ರ ಬಳಿಕ 4 ತಂಡವಾಗಿ ರಾಜ್ಯ ಪ್ರವಾಸಕ್ಕೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಳೆ ಹಾನಿ, ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ಮಾಡಿ ಜನಾಕ್ರೋಶವನ್ನು ಸರ್ಕಾರದ ಮುಂದಿಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಜನೋತ್ಸವಕ್ಕೆ ಮೊದಲೇ ಜನಾಕ್ರೋಶವನ್ನು ಬಹಿರಂಗ ಪಡಿಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಸರ್ಕಾರ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ವಿಪಕ್ಷ ಕಾಂಗ್ರೆಸ್ ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿಯಲು ಮುಂದಾಗಿದೆ. ಜನೋತ್ಸವ ಇಲ್ಲಾ ರಾಜ್ಯದಲ್ಲಿ ಜನಾಕ್ರೋಶ ಇದೆ ಎಂಬುದನ್ನು ಬಿಂಬಿಸುವುದು ಕಾಂಗ್ರೆಸ್ ಲೆಕ್ಕಾಚಾರ ಹಾಕಿರುವಂತಿದೆ.