ಬೆಂಗಳೂರು: ಮಹೇಶ್ ಕುಮಟಳ್ಳಿ ಪರ ಮಾಜಿ ಸಚಿವ, ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಬ್ಯಾಟಿಂಗ್ ನಡೆಸಿ ರೇಣುಕಾಚಾರ್ಯ ವಿರುದ್ಧ ಗರಂ ಆಗಿದ್ದಾರೆ.
ಕುಮಟಳ್ಳಿಗೆ ಸಚಿವ ಸ್ಥಾನ ನೀಡಬೇಕು. 11 ಜನ ನೂತನ ಶಾಸಕರಲ್ಲಿ ಅವರೊಬ್ಬರನ್ನು ಕೈ ಬಿಟ್ಟರೆ ತಪ್ಪಾಗುತ್ತದೆ. ಗೆದ್ದ 11 ಶಾಸಕರಲ್ಲಿ ಮಹೇಶ್ ಕುಮಟಳ್ಳಿ ಅವರನ್ನು ಕೈ ಬಿಡುವುದು ಒಳ್ಳೆಯದಲ್ಲ. ಕುಮಟಳ್ಳಿಗೆ ಇದರಿಂದ ಬೇಸರವಾಗಬಹುದು ಎಂದಿದ್ದಾರೆ.
ಶಾಸಕರ ಭವನದಲ್ಲಿ ಮಾತನಾಡಿದ ನಿರಾಣಿ, ಗೆದ್ದ ಉಳಿದವರನ್ನು ಸಚಿವರನ್ನಾಗಿ ಮಾಡಿ ಇವರೊಬ್ಬರನ್ನು ಕೈ ಬಿಡುವುದು ಸರಿಯಲ್ಲ. ಸಿಎಂಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಆದರೆ ಶಾಸಕನಾಗಿ ಹೀಗೆ ಮಾಡಿ ಎಂದು ಹೇಳಬಹುದಷ್ಟೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಎಂಗೆ 50 ವರ್ಷಕ್ಕೂ ಹೆಚ್ಚು ರಾಜಕೀಯ ಅನುಭವ ಇದೆ. ಎಲ್ಲವನ್ನೂ ಬಗೆಹರಿಸಿ ಸಿಎಂ ಸಚಿವರನ್ನಾಗಿ ಮಾಡ್ತಾರೆ ಎನ್ನುವ ವಿಶ್ವಾಸವಿದೆ ಎಂದ ಅವರು ನಾನು ಸಚಿವ ಸ್ಥಾನದ ಆಕಾಂಕ್ಷಿ ಅಂತ ಬಹಿರಂಗವಾಗಿ ಹೇಳಿದರು. ಇದನ್ನೂ ಓದಿ:ಸಂಪುಟ ಪುನಾರಚನೆ ಅಲ್ಲ ವಿಸ್ತರಣೆಯೇ ಎಲ್ಲ – ಹಾಲಿ ಮೂವರು ಸಚಿವರೂ ಸೇಫ್
ಸಚಿವ ಸ್ಥಾನ ನೀಡುವುದು ಸಿಎಂ ಯಡಿಯೂರಪ್ಪನವರಿಗೆ ಬಿಟ್ಟ ನಿರ್ಧಾರ. ಸಚಿವ ಸ್ಥಾನ ನೀಡಿದರೆ ಸಚಿವನಾಗಿ ಕೆಲಸ ಮಾಡುತ್ತೇನೆ. ಕೊಡದೇ ಇದ್ದರೆ ಶಾಸಕನಾಗಿ ಕೆಲಸ ಮಾಡುತ್ತೇನೆ. ನನಗೆ ಮಂತ್ರಿ ಮಾಡಬೇಕು ಅಂತ ಜನತೆ ಒತ್ತಾಯ, ಶ್ರೀಗಳ ಒತ್ತಾಯ, ಸಮುದಾಯ ಒತ್ತಾಯವಿದೆ. ಆದರೆ ಸಿಎಂ ಅಂತಿಮ ನಿರ್ಧಾರ ಮಾಡಬೇಕು. ಸಿಎಂ ಏನೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧ ಎಂದು ತಿಳಿಸಿದರು.
117 ಜನ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳೇ. ಆದರೆ ಇರೋದು 16 ಮಂತ್ರಿಗಳ ಸ್ಥಾನ ಮಾತ್ರ. ಹೀಗಾಗಿ ಯಾರಿಗೆ ಕೊಡಬೇಕು ಅಂತ ಸಿಎಂ ನಿರ್ಧಾರವೇ ಅಂತಿಮ. ಎಲ್ಲರಿಗೂ ಸ್ಥಾನ ನೀಡುವುದು ಕಷ್ಟ. ನನಗೆ ಒಂದು ವೇಳೆ ಸಿಗಲಿಲ್ಲದಿದ್ದರೂ ಯಾವುದೇ ಅಸಮಾಧಾನ ಇಲ್ಲ ಎಂದರು.
ಒಂದು ಕಡೆ ಸಚಿವ ಸ್ಥಾನ ಸಿಗೋದು ಡೌಟ್ ಅಂತ ಗೊತ್ತಾಗಿದ್ದೆ ತಡ ನಿರಾಣಿ ತಮ್ಮ ಅಸಮಾಧಾನವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮೇಲೆ ತೀರಿಸಿಕೊಂಡಿದ್ದಾರೆ. ಇತ್ತೀಚೆಗೆ ಸಂಪುಟ ವಿಸ್ತರಣೆ ಬಗ್ಗೆ ರೇಣುಕಾಚಾರ್ಯ ಹೋದ ಬಂದ ಕಡೆ ಮಾತಾಡುತ್ತಿದ್ದಾರೆ. ಯಾರಿಗೆ ಸಚಿವ ಸ್ಥಾನ ಬೇಡ ಎಂದು ಹೇಳುತ್ತಿದ್ದಾರೆ. ಇದನ್ನು ಅರಿತಿರುವ ನಿರಾಣಿ ಸಂಪುಟ ವಿಸ್ತರಣೆ ಬಗ್ಗೆ ರೇಣುಕಾಚಾರ್ಯ ಮಾತನಾಡುತ್ತಾರೆ ಅವರನ್ನು ಕೇಳಿ ಅಂತ ಲೇವಡಿ ಮಾಡಿ ಆಕ್ರೋಶ ಹೊರ ಹಾಕಿದರು.